14 ನಿಮಿಷದಲ್ಲಿ 13 ಕೆ.ಜಿ.ಯಷ್ಟು ಹಾಲು ಕರೆದ ಯುವಕನಿಗೆ 15 ಸಾವಿರ ನಗದು ಬಹುಮಾನ!!
ಚಾಮರಾಜನಗರ: ನಾಡಹಬ್ಬ ದಸರಾ ಅಂಗವಾಗಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ಪಶು ವೈದ್ಯಕೀಯ ಇಲಾಖೆ ವತಿಯಿಂದ ಗರಿಷ್ಠ ಹಾಲು ಕರೆಯುವ ಸ್ಪರ್ಧೆ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಚಾರದ ಕೊರತೆಯಿಂದಾಗಿ ಜಿಲ್ಲೆಯ 12 ರೈತರು ಮಾತ್ರ ತಮ್ಮ ಹಸುಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ 10 ಸಾವಿರ ಹಾಗು ತೃತೀಯ ಬಹುಮಾನ 5 ಸಾವಿರ ರೂಪಾಯಿ ಬಹುಮಾನವನ್ನ ಪಶು ಇಲಾಖೆಯಿಂದ ನೀಡಲಾಗುತ್ತಿದ್ದು ಪ್ರಥಮ ಸ್ಥಾನವನ್ನು ಮೇಲಾಜಿಪುರದ ನವೀನ, ಕಾಗಲವಾಡಿಯ ಮುರುಗೇಶ ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಮೂಡಲಪುರದ ಬಸವರಾಜ ಪಡೆದುಕೊಂಡರು.
14 ನಿಮಿಷದಲ್ಲಿ ನವೀನ್ ಎಂಬವರು 13.200 ಕೆಜಿ ಹಾಲನ್ನು ಕರೆದು ಮೊದಲ ಸ್ಥಾನ ಪಡೆದು 15 ಸಾವಿರ ನಗದು ಪುರಸ್ಕಾರಕ್ಕೆ ಪಾತ್ರರಾದರು. ಕಾಗಲವಾಡಿ ಗ್ರಾಮದ ಶಿವಪ್ಪ 8.200 ಕೆಜಿ ಹಾಲನ್ನು ಕರೆದು ದ್ವಿತೀಯ ಸ್ಥಾನ, ಮೂಡಲಪುರ ಗ್ರಾಮದ ಬಸವಣ್ಣ 7.850 ಕೆಜಿ ಹಾಲಿನ ಇಳುವರಿ ಪಡೆದು ಮೂರನೇ ಸ್ಥಾನ ಗಳಿಸಿದರು.
ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ರಾಸುಗಳ ಆರೋಗ್ಯ ಶಿಬಿರ, ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು. ಬರದ ಬೇಗೆಯಿಂದ ಅನ್ನದಾತರು ಕಂಗಾಲಾಗಿದ್ದು ಶೀಘ್ರ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಪಶು ಇಲಾಖೆ ಉಪನಿರ್ದೇಶಕ ಹನುಮೇಗೌಡ ತಿಳಿಸಿದರು.