ರೈತರ ವಿರುದ್ಧ ತನಿಖಾ ಸಂಸ್ಥೆಗಳ ಸಮನ್ಸ್ | 56 ಇಂಚು ಅಗಲದ ಗುಂಡಿಗೆ ಮುದುಡಿಕೊಂಡಿದೆ ಎಂದ ರೈತರು! - Mahanayaka
10:27 PM Thursday 19 - September 2024

ರೈತರ ವಿರುದ್ಧ ತನಿಖಾ ಸಂಸ್ಥೆಗಳ ಸಮನ್ಸ್ | 56 ಇಂಚು ಅಗಲದ ಗುಂಡಿಗೆ ಮುದುಡಿಕೊಂಡಿದೆ ಎಂದ ರೈತರು!

18/01/2021

ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಮೂಲಕ ನೋಟಿಸ್ ರವಾನಿಸಿ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಮುಖಂಡ ಶಿವಕುಮಾರ್ ಕಕ್ಕ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರಲ್ಲದೇ ರೈತರ ಅಭಿಯಾನದಲ್ಲಿ ಭಾಗಿಯಾದವರ ಅಥವಾ ಅಭಿಯಾನವನ್ನು ಬೆಂಬಲಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದನ್ನು ಎಲ್ಲ ರೈತ ಸಂಘಟನೆಗಳು ಖಂಡಿಸಿವೆ ಎಂದು ಹೇಳಿದ್ದಾರೆ.

ತನಿಖಾ ತಂಡಗಳ ಸಮನ್ಸ್ ಕೇಂದ್ರ ಸರ್ಕಾರ ದುರ್ಬಲಗೊಳ್ಳುತ್ತಿರುವ ಸಂಕೇತವಾಗಿದೆ ಎಂದು ರೈತ ಮುಖಂಡರಾದ ಬಲ್ ದೇವ್ ಸಿಂಗ್ ಸಿರ್ಸಾ ಮತ್ತು ಮನ್ ಜೀನ್ ಸಿಂಗ್ ರಾಯ್ ಹೇಳಿದ್ದಾರೆ. ಎನ್ ಐಎ ಹೆಸರಿನಲ್ಲಿ ಸರ್ಕಾರ ಈ ರೀತಿಯ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.


Provided by

ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ‘ಸಿಖ್ ಫಾರ್ ಜಸ್ಟೀಸ್’ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಸಾಕ್ಷಿಗಳಾಗಿ ಪರಿಗಣಿಸಿ ಪಂಜಾಬಿ ನಟ ದೀಪು ಸಿಧು ಸೇರಿದಂತೆ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದವರು ಹಾಗೂ ಪ್ರತಿಭಟನಾ ನಿರತ 40 ಮಂದಿಗೆ ಎನ್ ಐಎ ಸಮನ್ಸ್ ನೀಡಿದೆ.

ಈ ಸಮನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು, 56 ಇಂಚು ಅಗಲದ ಗುಂಡಿಗೆ ಈಗ ಮುದುಡಿಕೊಂಡಿದೆ. ನಮ್ಮ ಹೋರಾಟದ ಮುಂದೆ ಸರ್ಕಾರ ದುರ್ಬಲವಾಗಿದೆ. ನಮ್ಮನ್ನು ವಿಭಜಿಸಲು ಸರ್ಕಾರ ನಡೆಸುತ್ತಿರುವ ಪ್ರಯತ್ನ ವಿಫಲವಾಗಿದೆ ಎಂದು ಸಿರ್ಸ ಹೇಳಿದ್ದಾರೆ.

ಇತ್ತೀಚಿನ ಸುದ್ದಿ