ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ನನಗೆ ನ್ಯಾಯ ಸಿಗುವುದು ಅನುಮಾನ | ಸಂತ್ರಸ್ತ ಯುವಕ - Mahanayaka
12:52 AM Friday 20 - September 2024

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ನನಗೆ ನ್ಯಾಯ ಸಿಗುವುದು ಅನುಮಾನ | ಸಂತ್ರಸ್ತ ಯುವಕ

goonibeedu
27/05/2021

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ ಐ ಅರ್ಜುನ್ ಎಂಬಾತ ದಲಿತ ಯುವಕ ಪುನೀತ್ ಗೆ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಂತ್ರಸ್ತ ಯುವಕ ಪುನೀತ್ ಅವರು ಸಾಮಾಜಿಕಜಾಲದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಬಯಲು ಮಾಡಿದ್ದಾರೆ.

ನನಗೆ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ಎಂಬ ವ್ಯಕ್ತಿ ಪ್ರಮುಖ ಸಾಕ್ಷಿಯಾಗಿದ್ದಾನೆ. ಆದರೆ, ಚೇತನ್ ಇದೀಗ ಈ ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾನೆ. ಈ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ನಾನು ಚೇತನ್ ಜೊತೆಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ ಆದರೆ ಆತ ನನ್ನ ಕೈಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಘಟನೆಯ ಬಳಿಕ ಪೊಲೀಸರು ನನ್ನ ಮನೆಗೆ ಬಂದು, ನಿನಗೆ 2 ಲಕ್ಷ ಹಣದ ಜೊತೆಗೆ ಡಿವೈಎಸ್ ಪಿ ಕಚೇರಿಯಲ್ಲಿ ಒಂದು ಕೆಲಸ ಕೊಡಿಸುತ್ತೇವೆ. ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡು ಎಂದು ಆಮಿಷವೊಡ್ಡಿದ್ದಾರೆ. ಆದರೆ ನನಗೆ ಆಗಿರುವ ನೋವು ನನಗೆ ಮಾತ್ರವೇ ಗೊತ್ತು. ಇವರ ವಿರುದ್ಧ ನಾನು ಹೋರಾಟ ಮುಂದುವರಿಸುತ್ತೇನೆ ಎಂದು ಪುನೀತ್ ಹೇಳಿದ್ದಾರೆ.


Provided by

ಈ ಪ್ರಕರಣದಲ್ಲಿ ಪೊಲೀಸರು ಭಾಗಿಯಾಗಿರುವ ಕಾರಣ ನನಗೆ ನ್ಯಾಯ ಸಿಗುವುದಿಲ್ಲ ಎನ್ನುವ ಅನುಮಾನ ನನಗೆ ಕಾಡುತ್ತಿದೆ. ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ಇನ್ನೂ 6 ತಿಂಗಳ ಹಿಂದೆ ಮಹಿಳೆಯ ಜೊತೆಗೆ ಮಾತನಾಡಿದ ಆಡಿಯೋವನ್ನು ಈ ಪ್ರಕರಣದಲ್ಲಿ ಬಳಸುತ್ತಿದ್ದಾರೆ. ಆ ಮಹಿಳೆಯಿಂದ ಕೂಡ ಪ್ರಕರಣ ದಾಖಲಿಸಿ, ಈ ಪ್ರಕರಣದಿಂದ ತಾನು ಹಿಂದೆ ಸರಿಯುವಂತೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪುನೀತ್ ನೋವು ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ