ಚಾಮರಾಜನಗರ ಆಕ್ಸಿಜನ್ ದುರಂತ | ತಪ್ಪಿತಸ್ಥರ ವಿರುದ್ಧ ಕ್ರಮ, ಸಂತ್ರಸ್ತ ಕುಟುಂಬಗಳಿಗೆ 50 ಲಕ್ಷ ಪರಿಹಾರಕ್ಕೆ SDPI ಆಗ್ರಹ
ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 2 ರ ರಾತ್ರಿ ಆಕ್ಸಿಜನ್ ಪೂರೈಕೆ ಕೊರತೆಯಿಂದ ನಡೆದ ಘಟನೆ ನಡೆದು ಈಗಾಗಲೇ 40 ದಿನಗಳು ಕಳೆದಿದ್ದು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಘಟನೆ ನಡೆದ ದಿನದಿಂದ ನಿರಂತರವಾಗಿ ಸಂತ್ರಸ್ತರ ಪರವಾಗಿ, ನ್ಯಾಯಕ್ಕಾಗಿ ಹೋರಾಟವನ್ನು ಮಾಡಿ ಕೊಂಡು ಬಂದಿದೆ. ಇಷ್ಟಾದರೂ ಸಹ ಸರ್ಕಾರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ರಾಜ್ಯ ಕಾರ್ಯದರ್ಶಿ ಅಬ್ರಾರ್ ಸರ್ಕಾರವನ್ನು ಟೀಕಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ಸಾವಿಗೀಡಾಗಿದವರ ಮನೆಗಳಿಗೆ ಈಗಾಗಲೇ ನಮ್ಮ ಪಕ್ಷದ ಜಿಲ್ಲಾ ನಾಯಕರು ಭೇಟಿ ನೀಡಿ ಸಂತ್ರಸ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸಂತ್ರಸ್ತರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ. ಅವರು ಅಳಲು ಏನು. ಸರ್ಕಾರದಿಂದ ಸಂತ್ರಸ್ತರು ಏನು ಬಯಸುತ್ತಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಲಾಗಿದೆ. ಒಟ್ಟಾರೆ ಸಂತ್ರಸ್ತರ ಬೇಡಿಕೆ ಇಷ್ಟೆ. ಪರಿಹಾರ ಮತ್ತು ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಲೇ ಬೇಕು ಎಂಬುವುದಾಗಿದೆ. ಈ ನಿಟ್ಟಿನಲ್ಲೇ ಘಟನೆ ನಡೆದ ದಿನದಿಂದಲೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಹೋರಾಟವನ್ನು ಮಾಡಿ ಕೊಂಡು ಬಂದಿರುತ್ತೇವೆ. ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದೆಯೂ ಸಹ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಘಟನೆಯಲ್ಲಿ ಸಾವಿಗೀಡಾಗಿದವರ ಎಲ್ಲಾ 36 ಕುಟುಂಬಸ್ಥರಿಗೆ ತಲಾ ಒಂದು ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ನೀಡ ಬೇಕು. ಘಟನೆಗೆ ಕಾರಣಕರ್ತರಾದ ಚಾಮರಾಜನಗರ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಅವರ ಸೇವೆಯಿಂದ ಅಮಾನತ್ತು ಮಾಡಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿಯೂ ಸಹ ಘಟನೆಗೆ ಒಂದು ಕಾರಣ ಆಗಿದೆ. ಘಟನೆ ನಡೆದ ನಂತರ ಚಾಮರಾಜನಗರಕ್ಕೆ ಭೇಟಿ ನೀಡಿ ಆಕ್ಸಿಜನ್ ಕೊರತೆಯಿಂದ ಕೇವಲ ಮೂರು ಮಂದಿ ಸತ್ತಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ ಆರೋಗ್ಯ ಸಚಿವರು, ಸಂಸದ ಶ್ರೀನಿವಾಸ್ ಪ್ರಸಾದ್ ಹಾಗೂ ಅಸಹಾಯಕ ಶಾಸಕ ಪುಟ್ಟರಂಗ ಶೆಟ್ಟಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು ಎಂದು ಅವರು ಒತ್ತಾಯಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಮಜೀದ್ ಮಾತನಾಡಿ, ನ್ಯಾಯಾಂಗ ತನಿಖಾ ಸಮಿತಿ ತನ್ನ ವರದಿಯಲ್ಲಿ ಘಟನೆಗೆ ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣ ಎಂದು ಉಲ್ಲೇಖಿಸಿದೆ. ಅಲ್ಲದೇ ಮುಂಚಿತವಾಗಿ ಅಗತ್ಯಕ್ಕೆ ಅನುಸಾರವಾಗಿ ಜಿಲ್ಲಾಡಳಿತ ಆಕ್ಸಿಜನ್ ತರಿಸುವುದರಲ್ಲಿ ವಿಫಲವಾಗಿದೆ. ಘಟನೆಯ ನಂತರ ದಾಖಲೆಗಳನ್ನು ತಿರುಚಲಾಗಿದೆ ಎಂದು ಗಂಭೀರವಾದ ಅಂಶವನ್ನು ವರದಿಯಲ್ಲಿ ವಿವರಿಸಲಾಗಿದೆ. ಬಹಳ ಮುಖ್ಯವಾಗಿ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಕುರಿತು ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ. ತನಿಖಾ ಸಮಿತಿ ವರದಿಯ ಗಾಂಭೀರ್ಯತೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವ ಇವರ ನಡೆ ಅತ್ಯಂತ ಅವಮಾನವೀಯ. ಈ ಸರ್ಕಾರಕ್ಕೆ ಕ್ಕಿಂಚಿತ್ತೂ ಮಾನ ಮರ್ಯಾದೆ ಇದ್ದಿದ್ದರೆ ಮೊದಲು ಸುರೇಶ್ ಕುಮಾರ್ ರವರಿಂದ ಈಗಾಗಲೇ ರಾಜೀನಾಮೆ ಪಡೆಯ ಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ರಾತ್ರಿ ಹೊತ್ತಲ್ಲಿ ವರ್ಗಾವಣೆ ಆಗಿ ಬೆಳಗಿನ ಜಾವ ವರ್ಗಾವಣೆ ರದ್ದು ಆಗುತ್ತೆ ಎಂದರೆ ಜಿಲ್ಲಾಧಿಕಾರಿಗಳ ರಾಜಕೀಯ ಪ್ರಭಾವ ಎಷ್ಟರ ಬಹುದು ಎಂದು ಮಜೀದ್ ಪ್ರಶ್ನೆ ಮಾಡಿದರು. ಬಹುಶಃ ಜಿಲ್ಲಾಧಿಕಾರಿಗಳು ಈ ಪ್ರಭಾವ ಆಕ್ಸಿಜನ್ ತರಿಸುವುದರಲ್ಲಿ ತೋರಿಸುತ್ತಿದ್ದರೆ ಈ ದುರ್ಘಟನೆಯೇ ಆಗುತ್ತಿರಲಿಲ್ಲ ಎಂದು ಮಜೀದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷರಾದ ಕಲೀಲ್ ಉಲ್ಲಾ ಮಾತನಾಡಿ, ನ್ಯಾಯಾಂಗ ತನಿಖಾ ಸಮಿತಿ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರಿಂದ ದೂರು ಪಡೆಯಲು ಮೈಸೂರಿನಲ್ಲಿ ಕಚೇರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಸಂತ್ರಸ್ತರಿಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚು. ಆದುದರಿಂದ ದೂರು ನೀಡಲು ಸಮಯಾವಕಾಶ ಹೆಚ್ಚು ಮಾಡಿ ದೂರು ಸಲ್ಲಿಸಲು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೇ ತನಿಖೆ ಸಮಿತಿಯ ಕಚೇರಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯರಾದ ಮಹೇಶ್ ಮಾತನಾಡಿ, ಆಕ್ಸಿಜನ್ ದುರ್ಘಟನೆ ಸರ್ಕಾರದ ಬೇಜವಾಬ್ದಾರಿತನದಿಂದಲೇ ಆಗಿದೆ. ಸಾವಿಗೀಡಾಗಿದವರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಹ ಇದ್ದು, ಸಂತ್ರಸ್ತರ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ಕೂಡ ಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಮಹಿಳೆಯೂ ಭಾಗಿಯಾಗಿದ್ದರು.