ತುಮಕೂರು: ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ - Mahanayaka
10:35 PM Thursday 19 - September 2024

ತುಮಕೂರು: ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ

yathish kumar
10/10/2021

ತುಮಕೂರು: ತುಮಕೂರಿನ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರು ಮಾಡಿ ಸೂಕ್ತ ಕಟ್ಟಡ  ನಿರ್ಮಿಸಿ ಕೊಡಲು ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ವಿಜೇತ, ಚಿತ್ರಕಲಾ ಶಿಕ್ಷಕರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ನಟರಾಜು ಜಿ.ಎಲ್. ಸರ್ಕಾರಕ್ಕೆ ಮನವಿ  ಮಾಡಿದ್ದಾರೆ. ಮನವಿಗೂ ಮುನ್ನ ರಕ್ತದಾನ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಯಿತು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ್ರು ಅವರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮನವಿಯಲ್ಲಿ ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 1993 ರಿಂದ ಪ್ರಾರಂಭಗೊಂಡಿರುವ “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ”ವು ಕಳೆದ 25 ವರ್ಷಗಳಿಂದ ಇದೇ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತದೆ. ಜೊತೆಗೆ ಗುಣಮಟ್ಟದ ಚಿತ್ರಕಲಾ ಶಿಕ್ಷಣವನ್ನು ನೀಡುತ್ತಿದೆ. ಮತ್ತು ಈ ಕಾಲೇಜಿನಲ್ಲಿ ಚಿತ್ರಕಲಾಭ್ಯಾಸ ಮಾಡಿದ ವಿದ್ಯಾರ್ಥಿಗಳು “ತುಮಕೂರು ವಿಶ್ವವಿದ್ಯಾನಿಲಯದ ಬಿ.ಎಫ್.ಎ. (ಬ್ಯಾಚುಲರ್ ಆಫ್ ಫೈನ್ ಆರ್ಟ್) ಪದವಿ ಪರೀಕ್ಷೆಯಲ್ಲಿ ಪ್ರಥಮ ಮತ್ತು ತೃತೀಯ ರ್ಯಾಂಕ್ ನೊಂದಿಗೆ ಗೋಲ್ಡ್‍ಮೆಡಲ್ ಪಡೆದುಕೊಂಡಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ”.

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಖಾಸಗಿ ಕಂಪನಿಗಳ ಡಿಸೈನರ್‍ಗಳಾಗಿ ಉದ್ಯೋಗ ಮಾಡುತ್ತಾ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಕಲಾವಿದರಾಗಿ ನಮ್ಮ ನಾಡಿಗೆ ಕಲಾಸೇವೆ ಸಲ್ಲಿಸುತ್ತಿದ್ದಾರೆ.


Provided by

nataraju g l

ನಟರಾಜು ಜಿ .ಎಲ್., ಉಪಾಧ್ಯಕ್ಷರು ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ (ರಿ ) ತುಮಕೂರು

ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕಲಿತ ಚಿತ್ರಕಲಾವಿದರಿಗೆ “ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕøತ ಪ್ರಶಸ್ತಿಗಳು” ಲಭಿಸಿರುವುದು ತುಮಕೂರು ನಗರಕ್ಕೆ ಹೆಮ್ಮೆಯ ವಿಷಯ. ಈ ಮೇಲ್ಕಂಡ ಎಲ್ಲಾ ಅಂಶಗಳಿಂದ ಈ ಸರ್ಕಾರಿ ಚಿತ್ರಕಲಾ ಕಾಲೇಜು ಮಹತ್ವ ಪಡೆದಿದೆ.

ಕರ್ನಾಟಕ ರಾಜ್ಯದಲ್ಲಿ 105 ಚಿತ್ರಕಲಾ ಮಹಾವಿದ್ಯಾಲಯಗಳಿವೆ. ಇವುಗಳಲ್ಲಿ ಧಾರವಾಡ ಮತ್ತು ತುಮಕೂರು ನಗರಗಳಲ್ಲಿ ಮಾತ್ರ ಕೇವಲ 2 ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಗಳಿವೆ. ಆದರೆ ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಕ್ಕೆ 25 ವರ್ಷಗಳಿಂದ ಸ್ವಂತ ನಿವೇಶನ ಮತ್ತು ಸ್ವಂತ ಕಟ್ಟಡಗಳು ಇರುವುದಿಲ್ಲ ಎಂಬ ಸಂಗತಿ ವಿಷಾದನೀಯ ಸಂಗತಿಯಾಗಿದೆ.

ಸದ್ಯ ತುಮಕೂರು ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡಿಸಿರುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ನಡೆಯುತ್ತಿರುವ ಕಟ್ಟಡವನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಿಗೆ ಪತ್ರದ ಮೂಲಕ ಕಟ್ಟಡ ತೆರವುಗೊಳಿಸಲು ತಿಳಿಸಿರುತ್ತಾರೆ ಮತ್ತು ಮೇಲಿಂದ ಮೇಲೆ ಕಟ್ಟಡ ತೆರವುಗೊಳಿಸುವಂತೆ ಒತ್ತಡ ತರುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ.

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ಹಿರಿಯ ವಿದ್ಯಾರ್ಥಿಗಳಾದ ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಅನ್ನದ ಮಾರ್ಗ ತೋರಿಸಿದ ಈ ಸಂಸ್ಥೆಯನ್ನು ಕಟ್ಟಡದಿಂದ ಹೊರಹಾಕುವ ಸಂಗತಿ ನಮಗೆಲ್ಲರಿಗೆ ಮತ್ತು ಚಿತ್ರಕಲಾಕ್ಷೇತ್ರದ ಎಲ್ಲರಲ್ಲೂ ಅತೀವ ನೋವುಂಟು ಮಾಡುವ ಸಂಗತಿಯಾಗಿದೆ.

ಕಳೆದ 25 ವರ್ಷಗಳಿಂದ ನಡೆದುಕೊಂಡು ಬಂದಿರುವ ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಜಿಲ್ಲಾಡಳಿತ ಪರವಾಗಿ ಇದೇ ಆವರಣದಲ್ಲಿ ಸ್ವಂತ ನಿವೇಶನವನ್ನು ಮಂಜೂರು ಮಾಡಿಕೊಡಲು ತಮ್ಮಲ್ಲಿ ಸಮಗ್ರ ಚಿತ್ರಕಲಾವಿದರ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಹಾಗೂ ಸ್ಮಾರ್ಟ್ ಸಿಟಿಯ ಯೋಜನೆಯಡಿಯಲ್ಲಿ ಇತರೆ ಶಿಕ್ಷಣ ಸಂಸ್ಥೆಗಳಂತೆ ಚಿತ್ರಕಲಾ ಶಿಕ್ಷಣಕ್ಕೂ ಪ್ರಾಧ್ಯಾನ್ಯತೆ ನೀಡಿ ಈ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಸೂಕ್ತ ಕಟ್ಟಡವನ್ನು ಸಹಿತ ನಿರ್ಮಿಸಿಕೊಡಲು  ಮನವಿ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

 

ಇತ್ತೀಚಿನ ಸುದ್ದಿ