ಅರಕಲಗೂಡಿನ ಅಭಿವೃದ್ಧಿಗೆ ಕೊಡುಗೆ ನೀಡದೇ ಜನರ ಕಣ್ಣಿಗೆ ಮಂಕುಬೂದಿ ಎರಚುವ ನಿಮಗೆ ನಾಚಿಕೆಯಾಗುವುದಿಲ್ಲವೇ: ಸಚಿನ್ ಸರಗೂರು ಕಿಡಿ - Mahanayaka

ಅರಕಲಗೂಡಿನ ಅಭಿವೃದ್ಧಿಗೆ ಕೊಡುಗೆ ನೀಡದೇ ಜನರ ಕಣ್ಣಿಗೆ ಮಂಕುಬೂದಿ ಎರಚುವ ನಿಮಗೆ ನಾಚಿಕೆಯಾಗುವುದಿಲ್ಲವೇ: ಸಚಿನ್ ಸರಗೂರು ಕಿಡಿ

sachin saraguru
29/08/2022

ಹಾಸನ:  ಚುನಾವಣೆಯಲ್ಲಿ ಗೆದ್ದ ಬಳಿಕ ಬೆಂಗಳೂರಿಗೆ ತೆರಳುವ ಜನಪ್ರತಿನಿಧಿಗಳು, ಚುನಾವಣೆ ನಂತರ ಕಾಣದಂತೆ ಮಾಯವಾಗುವ  ಇತರ ಜನಪ್ರತಿನಿಧಿಗಳು ಚುನಾವಣೆ ಸಮೀಪಿಸುತ್ತಿರುವಂತೆ ಮತ್ತೆ ಹೈಡ್ರಾಮಾ ಆರಂಭಿಸಿದ್ದು,  ಜನರ ಕಷ್ಟ ಸುಖ ವಿಚಾರಿಸುವ ನೆಪದಲ್ಲಿ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಹಾಸನದ ಯುವ ಮುಖಂಡ ಸಚಿನ್ ಸರಗೂರು ಹೇಳಿದ್ದಾರೆ.


Provided by

ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತ್ಯಕ್ಷವಾಗುವ ಜನಪ್ರತಿನಿಧಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು,  ಚುನಾವಣೆಯ ಬಳಿಕ ಬೆಂಗಳೂರಿನಲ್ಲಿ ಮಜಾ ಮಾಡುತ್ತಿದ್ದವರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರದ ಜನರು ನೆನಪಾಗಿದ್ದು, ಕ್ಷೇತ್ರಕ್ಕೆ ಬಂದು ನಾನಾ ರೀತಿಯ ನಾಟಕಗಳನ್ನು ಆರಂಭಿಸಿ, ಜನರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗಿದೆ. ಕ್ಷೇತ್ರದ ಮೇಲೆ ಸ್ವಲ್ಪವೂ ಕಾಳಜಿ ಇಲ್ಲದವರು ಹಣದ ಪ್ರಭಾವ ಬಳಸಿ ಚುನಾವಣೆ ಗೆಲ್ಲಲು ಮುಂದಾಗುತ್ತಿದ್ದಾರೆ. ಇದರ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕಿದೆ. ಯಾವುದೇ ಆಮಿಷಗಳಿಗೆ ಒಳಗಾಗದೇ ಕ್ಷೇತ್ರ ಅಭಿವೃದ್ಧಿ ಮಾಡುವ ಇಚ್ಛಾ ಶಕ್ತಿ ಇರುವ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.


Provided by

ಚುನಾವಣೆ ಮುಗಿದ ಬಳಿಕ ನಾಲ್ಕೈದು ವರ್ಷಗಳ ವರೆಗೆ  ಬೆಂಗಳೂರಿನಲ್ಲಿ ಮಜಾ ಮಾಡುವ ಜನಪ್ರತಿನಿಧಿಗಳು, ಚುನಾವಣೆ ಸಮೀಪಿಸುವ ವೇಳೆ ಗ್ರಾಮಕ್ಕೆ ಬಂದು ಓಟು ಕೇಳುತ್ತಾರೆ. ಇವರಿಗೆ ನಾಚಿಕೆಯಾಗುವುದಿಲ್ಲವೇ? ನೀವು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ತೋರಿಸಿ ಮತ ಕೇಳಿ ನೋಡೋಣ ಎಂದು ಸಚಿನ್ ಸರಗೂರು ಸವಾಲೆಸೆದರು.

ಅರಕಲಗೂಡಿನಲ್ಲಿ  ಏಕಾಏಕಿ ಆಡಂಬರದ ಪ್ರಚಾರಕ್ಕೆ ಇಳಿದಿರುವ ಶಾಸಕರು, ಶಾಸಕ ಸ್ಥಾನ ಆಕಾಂಕ್ಷಿಗಳು ಅರಕಲಗೋಡಿಗೆ ನೀವು ಏನಾದರೂ ಕೊಡುಗೆ ನೀಡಿದ್ದೀರಾ? ಎಂದು  ಪ್ರಶ್ನಿಸಿದ ಸಚಿನ್ ನಿಮ್ಮ ಖಾತೆಗೆ ಹಣ ತುಂಬಿಕೊಳ್ಳಲು ಇಲ್ಲಿ ಸ್ಪರ್ಧಿಸಬೇಡಿ, ಅರಕಲಗೋಡಿನ ಸಮಗ್ರ ಅಭಿವೃದ್ಧಿ ಮಾಡಿ ಬಳಿಕ ಜನರ ಬಳಿ ವೋಟು ಕೇಳಿ ಎಂದರು.

ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಸರಗೂರು ಗ್ರಾಮಕ್ಕೆ ಹಾಲಿ ಶಾಸಕರು, ಮಾಜಿ ಶಾಸಕರು, ಹಾಸನ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳು ಎಷ್ಟು ಬಾರಿ ಬಂದು ಹೋಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆಗಳೇನು ಅನ್ನೋದನ್ನು  ಅವರು ತಿಳಿಸಬೇಕಿದೆ. ಸರಗೂರಿನ ಅಭಿವೃದ್ಧಿಗೆ  ಏನು ಕ್ರಮಕೈಗೊಳ್ಳಲಿದ್ದಾರೆ ಅನ್ನೋದನ್ನು ಹೇಳಲಿ ಎಂದು ಅವರು ಒತ್ತಾಯಿಸಿದರು.

ಜನರು ಹಣ, ಹೆಂಡ ಸೇರಿದಂತೆ ಯಾವುದೇ ಆಮಿಷಗಳಿಗೆ ಒಳಗಾಗದೇ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಈ ಮೂಲಕ ಕ್ಷೇತ್ರವನ್ನು ನಿರ್ಲಕ್ಷಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಚಿನ್ ಇದೇ ವೇಳೆ ಒತ್ತಾಯಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ