ಮೀಸಲಾತಿ ಹೆಚ್ಚಳ: ಸರ್ವ ಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಮಾತುಗಳು

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ನ್ಯಾ.ನಾಗಮೋಹನ ದಾಸ್ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಹೆಚ್ಚಿಸಬೇಕೆಂದು ಇಂದಿನ ಸರ್ವಪಕ್ಷಗಳ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಗಳ ಕುರಿತು ಸಿದ್ದರಾಮಯ್ಯ ಸುದೀರ್ಘವಾದ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಎಸ್.ಸಿ /ಎಸ್.ಟಿ ಮೀಸಲಾತಿ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು. ನಮ್ಮ ಸರ್ಕಾರ ಇದ್ದಾಗ ರಚನೆಯಾಗಿದ್ದ ನಾಗಮೋಹನ್ ದಾಸ್ ಅವರ ಸಮಿತಿ 7-2-2020ರಲ್ಲಿ ವರದಿ ನೀಡಿತ್ತು. ವರದಿ ಸಲ್ಲಿಕೆಯಾಗಿ ಎರಡು ವರ್ಷ ಮೂರು ತಿಂಗಳು ಕಳೆದರೂ ಸರ್ಕಾರ ವರದಿ ಜಾರಿಗೆ ಕ್ರಮ ಕೈಗೊಂಡಿರಲಿಲ್ಲ. ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಧರಣಿ ಆರಂಭ ಮಾಡಿ 240 ದಿನಗಳಾಗಿದೆ.
ಎಸ್.ಸಿ ಜನಾಂಗದ ಜನಸಂಖ್ಯೆಯಲ್ಲಿ ಏರಿಕೆ ಆಗಿದೆ, ಮೊದಲು ಎಸ್.ಸಿ ಜನಾಂಗದಲ್ಲಿ 6 ಜಾತಿಗಳು ಇದ್ದವು ಈಗ ಅದು 102 ಆಗಿದೆ. ಎಸ್.ಟಿ ಯಲ್ಲೂ 6 ಜಾತಿಗಳಿತ್ತು, ಅವು 52ಕ್ಕೆ ಏರಿದೆ. ಈಗ ಎಸ್,ಸಿ ಗಳಿಗೆ 15% ಹಾಗೂ ಎಸ್,ಟಿ ಗಳಿಗೆ 3% ಮೀಸಲಾತಿ ಇದೆ. ನಾಗಮೋಹನ್ ದಾಸ್ ಅವರ ವರದಿ ಎಸ್.ಸಿ ಮೀಸಲಾತಿಯನ್ನು 15% ಇಂದು 17% ಗೆ ಏರಿಕೆ ಮಾಡಬೇಕು ಹಾಗೂ ಎಸ್.ಟಿ ಗಳಿಗೆ 3% ಇಂದ 7% ಗೆ ಮೀಸಲಾತಿ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ.
2011ರ ಜನಗಣತಿ ಪ್ರಕಾರ ಎಸ್.ಸಿ. ಜನಸಂಖ್ಯೆ 17.15% ಇದೆ, ಎಸ್.ಟಿ 6.95% ಇತ್ತು, ಈಗ ಸ್ವಲ್ಪ ಏರಿಕೆ ಆಗಿದೆ. ಇದನ್ನೇ ನಾಗಮೋಹನ್ ದಾಸ್ ಸಮಿತಿ ಆಧಾರವಾಗಿಟ್ಟುಕೊಂಡು ಮೀಸಲಾತಿ ಹೆಚ್ಚಿಸುವಂತೆ ಶಿಫಾರಸು ಮಾಡಿದೆ.
ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳವಾಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮಾತ್ರ ಅವಕಾಶ ಇದೆ.
ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿಯ ಮೂಲಕ ಮೀಸಲಾತಿಯನ್ನು ಹೆಚ್ಚಿಸಿ ಅದನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಿದರೆ ನ್ಯಾಯಾಲಯದಲ್ಲಿಯೂ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಈ ಕೆಲಸವನ್ನು ಮೊದಲು ಕೇಂದ್ರ ಸರ್ಕಾರ ಮಾಡಬೇಕು. ಇದನ್ನೆ ನ್ಯಾಯಮೂರ್ತಿ ನಾಗಮೋಹನದಾಸ ಸಮಿತಿ ಶಿಫಾರಸು ಮಾಡಿರುವುದು.
ತಮಿಳುನಾಡಿನಲ್ಲಿ ಮೀಸಲಾತಿಯನ್ನು 69% ಗೆ ಹೆಚ್ಚಿಸಿ 9ನೇ ಶೆಡ್ಯೂಲ್ಗೆ ಸೇರಿಸಲಾಗಿದೆ. ಇದರಿಂದ ಸಂವಿಧಾನಾತ್ಮಕ ರಕ್ಷಣೆ ಸಿಕ್ಕಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ “ಕೆಲವು ವಿಶೇಷ ಸಂದರ್ಭದಲ್ಲಿ ಮೀಸಲಾತಿಯನ್ನು 50% ಗಿಂತ ಹೆಚ್ಚು ಮಾಡಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರ 103ನೇ ತಿದ್ದುಪಡಿ ಮಾಡಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ 10% ಮೀಸಲಾತಿ ನೀಡಿರುವುದರಿಂದ ಮೀಸಲಾತಿ ಪ್ರಮಾಣ 50% ಮೀರಿದೆ.
ಕೇಂದ್ರ ಸರ್ಕಾರದಲ್ಲಿರುವ ಮೀಸಲಾತಿ 49.5% ರಿಂದ 59.5% ಗೆ ಹೆಚ್ಚಾಗಿದೆ. ಇದು ಸದ್ಯ ಸುಪ್ರೀಂ ಕೋರ್ಟ್ ನಲ್ಲಿದೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಇರುವುದರಿಂದ ಬಿಜೆಪಿಗೆ ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಸುಗ್ರೀವಾಜ್ಞೆ ಮೂಲಕ ಮೀಸಲಾತಿಯನ್ನು ಹೆಚ್ಚಿಸಿ ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು.
ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆ ವಿಳಂಬವಾಗದಂತೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು ಎಂದು ಇಂದಿನ ಸಭೆಯಲ್ಲಿ ನಾನು ಒತ್ತಾಯಿಸಿದ್ದೇನೆ.
ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಲ್ಲಿ ಖರ್ಚು ಮಾಡುವ ಹಣದಲ್ಲಿ ಶೇ.10 ನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಮತ್ತು ಅಲೆಮಾರಿ ಸಮುದಾಯಕ್ಕೆ ಒಂದು ನಿಗಮ ರಚನೆ ಮಾಡಬೇಕು ಎಂದು ನ್ಯಾ.ನಾಗಮೋಹನದಾಸ ಸಮಿತಿ ಶಿಫಾರಸು ಮಾಡಿದೆ. ಇದನ್ನು ಕೂಡಾ ರಾಜ್ಯ ಸರ್ಕಾರ ಒಪ್ಪಿಕೊಂಡು ಜಾರಿಗೊಳಿಸಬೇಕು.
ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಮೀಸಲಾತಿ ಹೆಚ್ಚಳದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆಯನ್ನು ಕರೆಯಬೇಕೆಂದು ಬಹಳಷ್ಟು ಹಿಂದೆಯೇ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದೆ. ನಮ್ಮ ಪಕ್ಷದ ಶಾಸಕರು ಕೂಡ ಅನೇಕ ಬಾರಿ ಸದನದಲ್ಲಿ ಈ ಬಗ್ಗೆ ಆಗ್ರಹ ಮಾಡಿದ್ದರು. ಇಂದು ಸಭೆ ಕರೆದು ಚರ್ಚೆ ನಡೆಸಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ ಮತ್ತು ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬ ನಮ್ಮ ಅಭಿಪ್ರಾಯಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka