ತಂತ್ರಜ್ಞಾನ ಮತ್ತು ಸೇವಾ ಮನೋಭಾವದಿಂದ ಸಾಮಾನ್ಯರಿಗೆ ಸರ್ಕಾರಿ ವ್ಯವಸ್ಥೆ ಮುಟ್ಟಿಸಲು ಸಾಧ್ಯ: ಸಿಎಂ ಬಸವರಾಜ ಬೊಮ್ಮಾಯಿ - Mahanayaka
8:55 AM Thursday 19 - September 2024

ತಂತ್ರಜ್ಞಾನ ಮತ್ತು ಸೇವಾ ಮನೋಭಾವದಿಂದ ಸಾಮಾನ್ಯರಿಗೆ ಸರ್ಕಾರಿ ವ್ಯವಸ್ಥೆ ಮುಟ್ಟಿಸಲು ಸಾಧ್ಯ: ಸಿಎಂ ಬಸವರಾಜ ಬೊಮ್ಮಾಯಿ

cm bommai
23/02/2023

ಬೆಂಗಳೂರು: ತಂತ್ರಜ್ಞಾನ ಮತ್ತು ಸೇವಾ ಮನೋಭಾವ  ಜೊತೆಗೂಡಿದರೆ, ದೇಶದಲ್ಲಿ ಸರ್ಕಾರದ ವ್ಯವಸ್ಥೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಿಗೆ  ತಲುಪಿಸಲು ಸಾಧ್ಯ ಎನ್ನುವುದನ್ನು ಗ್ರಾಮ ಒನ್ ಕಾರ್ಯಕ್ರಮದ ಯಶಸ್ಸು  ನಿರೂಪಿಸಿದೆ  ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಒನ್ ಯೋಜನೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಒನ್ ಸೇವೆ, ಜೀವನೋಪಾಯ ಹಾಗೂ ಜ್ಞಾನಾರ್ಜನೆಗೆ ಮೂಲ:


Provided by

ಯಾವುದಾದರೂ ಒಂದು ವ್ಯವಸ್ಥೆಗೆ ಚಲನಾಶೀಲವಾದ ಶಕ್ತಿಯಿದ್ದರೆ ವೇಗವಾಗಿ ಮುಂದುವರೆಸಿಕೊಂಡು ಹೋಗಬಹುದು. ನಿಂತಲ್ಲೇ ನಿಂತರೆ ತುಕ್ಕು ಹಿಡಿಯುತ್ತದೆ. ಸರ್ಕಾರದ ಚಕ್ರ ನಿರಂತರವಾಗಿ  ಚಲಿಸಲು ಕೆಳಹಂತದ ಕೆಲಸಗಳು ಸರಿಯಾಗಿ ನಡೆಯಬೇಕು. ಜನರ ಬೇಕುಬೇಡಗಳ ಆಧಾರದ ಮೇಲೆ  ಬಹಳಷ್ಟು ಸೇವೆಗಳು ಒದಗಿಸಲಾಗುತ್ತಿದೆ ಎಂದರು.

ಕಾನೂನಿನ ವ್ಯಾಪ್ತಿಯಲ್ಲಿಯೇ ಕೆಲಸ:

ಸರ್ಕಾರ ತನ್ನ ವ್ಯವಸ್ಥೆಯಲ್ಲಿದ್ದ ಕೆಲವು ಅಧಿಕಾರವನ್ನು ನೀಡಲಾಗಿದೆ.    ವ್ಯವಸ್ಥೆ ಯಶಸ್ವಿಯಾಗಲು ಸೇವಾ ಮನೋಭಾವ ಮುಖ್ಯ.  ಮನೆ ಮನೆಗೆ ಸೇವೆ ತಲುಪಿಸುವ ಉದ್ದೇಶದಿಂದ  ಯೋಜನೆ ಜಾರಿಯಾಗಿದ್ದು, ಸೇವೆ ಸೇವೆಯಾಗಿಯೇ ಉಳಿಯಬೇಕು.  ಸೇವಾ ಮನೋಭಾವವನ್ನು ಮನಸ್ಸಿನಿಂದ ತೆಗೆಯಬಾರದು ಮಾಡಿದಾಗ ಹೆಚ್ಚಿನ ಸೇವೆ ನೀಡಲು ಸಾಧ್ಯವಿದೆ. ಜನರು ಹಳೆಯ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದು ಸೇವೆಗೆ, ಜೀವನೋಪಾಯಕ್ಕೆ ಅವಕಾಶವಾಗಿದೆ. ಜ್ಞಾನಾರ್ಜನೆಗೆ ಕೂಡ ಮೂಲವಾಗಿದೆ. ಸೇವೆಗಳನ್ನು ನೀಡಲು ನಿಮ್ಮನ್ನು ಸಬಲರಾಗಿಸಲಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಬೇಕು. ಜ್ಞಾನವಿದ್ದಲ್ಲಿ ಸಬಲೀಕರಣವಾಗುತ್ತದೆ ಎಂದರು.

ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಜಾರಿಯಲ್ಲಿದೆ.  ಗ್ರಾಮ್ ಒನ್ ಕೇಂದ್ರ‌ದಿಂದ ಬಂದ ಅರ್ಜಿಗಳು ವಿಲೇವಾರಿ ಆಗಲು ವಿಳಂಬವಾದರೆ ತಹಸಿಲ್ದಾರ ಕಚೇರಿಗೂ ಇದಕ್ಕೂ ವ್ಯತ್ಯಾಸ ಇರುವುದಿಲ್ಲ. ಪ್ರಾಮಾಣಿಕತೆಯಿಂದ, ದಕ್ಷತೆಯಿಂದ, ವೇಗವಾಗಿ ಕೆಲಸಮಾಡಬೇಕು ಎಂದರು.

ಜನಪರ ವ್ಯವಸ್ಥೆ ನಿರ್ಮಿಸಬೇಕು:

ಗ್ರಾಮ ಒನ್ ನಿಂದ ತ್ತಮ ಕೆಲಸಗಳಾಗುತ್ತಿರುವ ಬಗ್ಗೆ ಮಾಹಿತಿಯಿದ್ದು, ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವುದರಿಂದ ಜನರಲ್ಲಿ ವಿಶ್ವಾಸ ಮೂಡಿದೆ. ಒಂದು ವರ್ಷದಲ್ಲಿ ಒಂದೂವರೆ ಕೋಟಿಯಾಗಿರುವ ಮುಂದಿನ ವರ್ಷದಲ್ಲಿ ಮೂರು ಕೋಟಿ ತಲುಪುವ ಗುರಿಯನ್ನು ಹಾಕಿಕೊಳ್ಳಬೇಕು. ಜನಪರವಾಗಿರುವ, ಜನರಿಗಾಗಿ ವ್ಯವಸ್ಥೆ ಆಗಬೇಕು. ವ್ಯಾಪಕವಾಗಿ, ಯಶಸ್ವಿಯಾಗಿ, ಸಮರ್ಪಕವಾಗಿ ಕೆಲಸಗಳಾದಾಗ ಒಂದು ವ್ಯವಸ್ಥೆ ನಿರ್ಮಾಣವಾಗುತ್ತದೆ. ಅಂಥ ವ್ಯವಸ್ಥೆಯನ್ನು ಎಲ್ಲರೂ ಹುಟ್ಟುಹಾಕಬೇಕೆಂದು ಕರೆ ನೀಡಿದರು.

ಗ್ರಾಮ ಒನ್ ಕ್ರಾಂತಿಕಾರಿ ಯೋಜನೆ:

ಇದಕ್ಕೆ ಅರ್ಥಿಕವಾಗಿ ಇನ್ನಷ್ಟು ಬಲ‌ ಕೊಡುವ ಕೆಲಸ ಮಾಡಲಾಗುವುದು. ತಂತ್ರಜ್ಞಾನ ‌ಕ್ರಾಂತಿಯಾಗಿದೆ. ಜನರಿಗೆ ಸರಳವಾಗಿ ಸೇವೆಗಳು ಸಿಗುವಂತೆ‌ ಮಾಡಲಾಗುವುದು‌. ಗ್ರಾಮ ಒನ್ ಕೇಂದ್ರಗಳಲ್ಲಿ ಇನ್ನಷ್ಟು ಸೇವೆಗಳು, ಅಂತರ್ಜಾಲಕ್ಕೆ ವೇಗ,  ಮೆಮರಿ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಒನ್ ಕ್ರಾಂತಿಕಾರಿ ಯೋಜನೆ. ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದಿದೆ ಎಂದರು.

ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಒನ್ ಅನಿವಾರ್ಯ:

ಗ್ರಾಮ ಒನ್ ಸೇವೆಯಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಗ್ರಾಮ ಒನ್ ಕಾರ್ಯಕರ್ತ ಪರಿಶ್ರಮದಿಂದ, ವಿನೂತನವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಮಯಕ್ಕೆ ತಕ್ಕ ಸ್ಪಂದನೆ, ಉತ್ಸಾಹ, ಪರಿಶ್ರಮದಿಂದ ಆಡಳಿತ ವ್ಯವಸ್ಥೆ ಯಶಸ್ವಿಯಾಗುತ್ತದೆ. ಮುಂದಿನ ಐದು ವರ್ಷದಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಒನ್ ಅನಿವಾರ್ಯವಾಗಲಿದೆ. ಗ್ರಾಮ ಒನ್ ಗೆ ಶಕ್ತಿ ತುಂಬಲಾಗುವುದು. ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವುದು ಸರ್ಕಾರದ ಗುರಿ ಎಂದರು.

ಬಡವರ ಸೇವೆಗೆ ಆದ್ಯತೆ ನೀಡಿ:

ಗ್ರಾಮ ಒನ್ ವ್ಯವಸ್ಥೆಯಲ್ಲಿ ಬಹಳಷ್ಟು ಜನರ ಪರಿಶ್ರಮವಿದೆ. ನಿಮ್ಮ ಮಟ್ಟದಲ್ಲಿ ಸೇವೆಯನ್ನು ಸುಧಾರಿಸಿ ಉತ್ತಮಗೊಳಿಸಲು ಪ್ರಯತ್ನಿಸಿ. ನಿಮ್ಮ ದಿನಿನಿತ್ಯದ ಕೆಲಸದೊಂದಿಗೆ ಕನಿಷ್ಟ 10% ರಷ್ಟು ಹೆಚ್ಚು ಕೆಲಸವನ್ನು ಮಾಡಲು ಪ್ರಯತ್ನಿಸಿ, ಹೊಸ ಸೇವೆಗಳನ್ನು ಗ್ರಾಮ ಒನ್ ಸೇವೆಯಲ್ಲಿ ಸೇರಿಸಲು ಪ್ರಯತ್ನಿಸಿ. ಸಮಾಜದಲ್ಲಿ  ಸರ್ಕಾರ ಮತ್ತು ಜನರ ನಡುವೆ ಸೇತುವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಯುವ ಪಡೆ ನೀವಾಗಿದ್ದೀರಿ. ಕೆಲಸವನ್ನು ಮಾಡದಿರಲು ನೂರಾರು ಕಾರಣಗಳಿರಬಹುದು. ಆದರೆ ಬಡವರಿಗೆ ಸೇವೆ ಸಲ್ಲಿಸಲು ಒಂದು ಸಕಾರಣ ಸಾಕು. ಬಡವರಿಗೆ , ಕಷ್ಟದಲ್ಲಿರುವವರಿಗೆ ಮಾನವೀಯತೆಯಿಂದ ಸ್ಪಂದಿಸಿ, ಅವರ ಸೇವೆ ನೀಡಲು ಆದ್ಯತೆ ನೀಡಬೇಕೆಂದು ಗ್ರಾಮ ಒನ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಸರ್ಕಾರ ಮತ್ತು ಜನಸಾಮಾನ್ಯರ ಕೊಂಡಿ:

ಗ್ರಾಮ ಒನ್ ಕಾರ್ಯಕರ್ತರಿಗೆ ಜಿಲ್ಲಾವಾರು ಪ್ರಶಸ್ತಿಗಳನ್ನು ನೀಡಲು ಸರ್ಕಾರ ತೀರ್ಮಾನ ಮಾಡಿದೆ.  ಕಾರ್ಯಕರ್ತರು ತಮ್ಮ ಅನುಭವಗಳನ್ನು ದಾಖಲಿಸಲಬೇಕು.  ಶೇ 10 ರಷ್ಟು ಕೆಲಸವನ್ನು ಹೆಚ್ಚಿಸುವ ನಿರ್ಧಾರ ಮಾಡಬೇಕು.ಗ್ರಾಮ ಒನ್ ಇತರೆ ರಾಜ್ಯಗಳಲ್ಲಿಯೂ ಪ್ರಾರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ಸಮಾಜದಲ್ಲಿ ಹೊಸ ಯುವಕರ ಪಡೆ ಇದೆ. ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ದಕ್ಷತೆಯಿಂದ ಕೊಂಡಿಯಂತೆ ಕೆಲಸ ಮಾಡುವ ವ್ಯವಸ್ಥೆ ಇದೆ ಎನ್ನುವ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದರು. ಘರ್ಷಣೆಗಳಿಲ್ಲದಂತೆ ಕೆಲಸ ಮಾಡುವಂತಾಗಬೇಕು.  ಆರು ತಾಲ್ಲೂಕುಗಳನ್ನು ಸಂಪೂರ್ಣವಾಗಿ  ಕಾಗದ ರಹಿತ ಕಚೇರಿಗಳನ್ನಾಗಿ ಮಾಡಲು ಪ್ರಾಯೋಗಿಕವಾಗಿ ಕೈಗೊಂಡಿದ್ದು,  ನಾಡಕಚೇರಿಗಳನ್ನೂ ಕಾಗದ ರಹಿತ ಕಚೇರಿಗಳನ್ನಾಗಿಸಲಾಗುವುದು.  ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸಲು ಅನುಮತಿ ನೀಡಲಾಗುವುದು.  ಗ್ರಾಮೀಣ ಪ್ರದೇಶಗಳಲ್ಲಿ ಡಳಿತ ಸುಧಾರಣೆಯಾದರೆ ಎಲ್ಲರೂ ಯಶಸ್ವಿಯಾಗುತ್ತೇವೆ. ಅಧಿಕಾರದ ವಿಕೇಂದ್ರೀಕರಣದೊಂದಿಗೆ ಸೇವೆಗಳ ವಿಕೇಂದ್ರೀಕರಣವೂ ಆಗಬೇಕು ಎಂದ ಮುಖ್ಯಮಂತ್ರಿಗಳು  ಅಸಾಧ್ಯ ಎನ್ನುತ್ತಿದ್ದ ಕೆಲಸಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸುತ್ತಿರುವುದಕ್ಕಾಗಿ  ಅಭಿನಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ