ದಾರಿತಪ್ಪಿ ಅರಣ್ಯ ಸೇರಿದ್ದ ವೃದ್ಧೆ ಮೂರುದಿನಗಳ ಬಳಿಕ ಸುರಕ್ಷಿತವಾಗಿ ಮನೆಗೆ!

ದಾರಿತಪ್ಪಿ ಅರಣ್ಯ ಸೇರಿದ್ದ ವೃದ್ಧೆಯೊಬ್ಬರು ಮೂರು ದಿನಗಳ ಬಳಿಕ ಸುರಕ್ಷಿತವಾಗಿ ಮನೆ ಸೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ(80) ದಿಕ್ಕು ತಪ್ಪಿ ಅರಣ್ಯ ಸೇರಿದ್ದ ಮಹಿಳೆ. ಇವರು ಫೆಬ್ರವರಿ 28ರಂದು ಸಂಜೆ ದೋಂತಿಲದಿಂದ ನಾಪತ್ತೆಯಾಗಿದ್ದಾರೆ.
ಮಾರ್ಚ್ 3ರಂದು ಬೆಳಗ್ಗೆ ಮನೆಯಿಂದ ಸುಮಾರು 4 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರಣ್ಯದಲ್ಲೇ ಮೂರು ರಾತ್ರಿ ಹಾಗೂ ಎರಡು ಹಗಲು ಕಳೆದಿರುವ ಐಸಮ್ಮ ಜೀವಂತವಾಗಿ ಮನೆ ಸೇರಿದ್ದಾರೆ.
ಐಸಮ್ಮರಿಗೆ ವಯೋ ಸಹಜವಾಗಿ ಮಾತು ವಿರಳವಾಗಿತ್ತು. ಆದರೆ ತಮ್ಮ ನೆರೆಯ ಮನೆಗಳಿಗೆ ದಿನಾಲೂ ಭೇಟಿ ನೀಡಿ ಅವರೊಂದಿಗೆ ಬೆರೆತು ರಾತ್ರಿಯಾಗುತ್ತಲೇ ತಮ್ಮ ಮನೆ ಸೇರುತ್ತಿದ್ದರು. ಅದೇ ರೀತಿ
ಮೊನ್ನೆ ಸಂಜೆ ಮನೆಯಿಂದ ಹೊರಟ ಐಸಮ್ಮ ನಾಪತ್ತೆಯಾಗಿದ್ದರು. ಅವರ ಪುತ್ರ ಹಾಗೂ ಸ್ಥಳೀಯ ಯುವಕರು ನೆರೆಮನೆಗಳಲ್ಲಿ, ಹೊಸಮಜಲು ಪೇಟೆಯಲ್ಲೆಲ್ಲ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಮರುದಿನ ಮನೆ ಸಮೀಪದ ಕಾಡಿನಲ್ಲೂ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 1ರಂದು ಅವರು ಪೊಲೀಸರಿಗೆ ದೂರು ನೀಡಿ ಮತ್ತೆ ಹುಡುಕಾಟ ಮುಂದುವರಿಸಿದ್ದರು.
ಮಾರ್ಚ್ 3ರಂದು ಬೆಳಗ್ಗೆ ಹೊಸಮಜಲು ಹಾಲಿನ ಸೊಸೈಟಿಗೆ ಹಾಲು ತರುತ್ತಿದ್ದ ಶಿಜು ಎಂಬುವವರು ಮಣ್ಣಗುಂಡಿ ಸಮೀಪದ ಏರ್ತಿಲ ಎಂಬಲ್ಲಿ ರಕ್ಷಿತಾರಣ್ಯದಲ್ಲಿ ವೃದ್ಧೆಯೋರ್ವರನ್ನು ಕಂಡಿದ್ದಾರೆ. ಈ ಬಗ್ಗೆ ಅವರು ಹಾಲಿನ ಸೊಸೈಟಿಗೆ ಮಾಹಿತಿ ನೀಡಿದ್ದರು. ಮಾಹಿತಿ ಅರಿತ ಸ್ಥಳೀಯ ಯುವಕರು ಏರ್ತಿಲಕ್ಕೆ ತೆರಳಿ ಅರಣ್ಯದಲ್ಲಿದ್ದ ಐಸಮ್ಮರನ್ನು ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಬಂದರು. ಐಸಮ್ಮ ಆರೋಗ್ಯವಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw