ರೈತರ ಪ್ರತಿಭಟನೆ | ಅನುಚಿತ ವರ್ತನೆಯ ಆರೋಪದಲ್ಲಿ ಪತ್ರಕರ್ತ ಬಂಧನ
31/01/2021
ನವದೆಹಲಿ: ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಸಿಂಘು ಗಡಿ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪತ್ರಕರ್ತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಫ್ರಿಲ್ಯಾನ್ಸ್ ಪತ್ರಕರ್ತ ಮನದೀಪ್ ಪೂನಿಯಾ ಬಂಧಿತ ಆರೋಪಿಯಾಗಿದ್ದಾನೆ. ಶನಿವಾರ ರಾತ್ರಿ ಈತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಕರ್ತವ್ಯಕ್ಕೆ ಅಡ್ಡಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮೊದಲಾದ ಪ್ರಕರಣಗಳನ್ನು ಆರೋಪಿಯ ಮೇಲೆ ದಾಖಲಿಸಲಾಗಿದೆ ಎಂದು ಅಲಿಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಬೇಕು ಎಂದು ಸ್ಥಳೀಯರು ಶುಕ್ರವಾರ ಒತ್ತಾಯಿಸಿದ್ದರು. ಈ ವೇಳೆ ರೈತರು ಮತ್ತು ಸ್ಥಳೀಯರ ನಡುವೆ ನಡೆದ ಘರ್ಷಣೆಯಲ್ಲಿ ಅಲಿಪುರ ಠಾಣಾಧಿಕಾರಿ ಪ್ರದೀಪ್ ಪಾಲಿವಾಲ್ ಗಾಯಗೊಂಡಿದ್ದರು. ಸದ್ಯ ಸ್ಥಳದಲ್ಲಿ ಪ್ರತಿಭಟನೆ ಮುಂದುವರಿದಿದ್ದು ಭದ್ರತೆಯನ್ನು ಹೆಚ್ಚಿಸಲಾಗಿದೆ.