ಪೂರ್ವಜರ ಭೂಮಿ ಕಳೆದುಕೊಂಡದ್ದಕ್ಕೆ ಆಕ್ರೋಶ: ನ್ಯಾಯ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಸಹೋದರ-ಸಹೋದರಿ ಯತ್ನ
ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಸಹೋದರ ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನು ಪೊಲೀಸರು ತಡೆದ ಘಟನೆ ನಡೆದಿದೆ. ಗ್ರಾಮೀಣಾಭಿವೃದ್ಧಿ ಸಚಿವ ಗಿರೀಶ್ ಮಹಾಜನ್ ಭಾಗವಹಿಸಿದ್ದ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಈ ಘಟನೆ ನಡೆದಿದೆ.
ಜಿಲ್ಲೆಯ ಚಂದ್ವಾಡ್ ತಹಸಿಕ್ ನ ಶಿಂಗ್ವೆ ಮಾತೋಬಾಚೆ ಗ್ರಾಮದ ನಿವಾಸಿಗಳಾದ ಯೋಗೇಶ್ ಖತಾಲ್ ಹಾಗೂ ಇವರ ಸಹೋದರಿ ಅಶ್ವಿನಿ ಖತಾಲ್ ಎಂಬುವವರು ಇಲ್ಲಿನ ವಿಭಾಗೀಯ ಕಂದಾಯ ಆಯುಕ್ತರ ಕಚೇರಿಯ ಎದುರು ಒಂದು ತಿಂಗಳಿನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ಭೂ ದಾಖಲೆಗಳ ಇಲಾಖೆಯ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಅವರು ತಮ್ಮ ಪೂರ್ವಜರ ಭೂಮಿಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಇವರಿಬ್ಬರು ಸ್ಥಳೀಯ ಆಡಳಿತವು ಯಾವುದೇ ಕ್ರಮ ಕೈಗೊಳ್ಳದ್ದಕ್ಕೆ ಪ್ರತಿಭಟಿಸುತ್ತಿದ್ದರು. ನ್ಯಾಯ ಸಿಗದಿದ್ರೆ ಸ್ವಾತಂತ್ರ್ಯ ದಿನಾಚರಣೆಯಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದರು. ಆದರೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಇವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವಿಫಲಗೊಳಿಸಿದ್ದಾರೆ.