ಮಂಗಳೂರು ಮಹಾನಗರ ಪಾಲಿಕೆಯ ದಲಿತ ವಿರೋಧಿ ನೀತಿ | ಪ್ರತಿಭಟನೆಗೆ ನಿರ್ಧರಿಸಿದ ದಲಿತ ಹಕ್ಕುಗಳ ಸಮಿತಿ - Mahanayaka
6:54 AM Thursday 19 - September 2024

ಮಂಗಳೂರು ಮಹಾನಗರ ಪಾಲಿಕೆಯ ದಲಿತ ವಿರೋಧಿ ನೀತಿ | ಪ್ರತಿಭಟನೆಗೆ ನಿರ್ಧರಿಸಿದ ದಲಿತ ಹಕ್ಕುಗಳ ಸಮಿತಿ

02/02/2021

ಮಂಗಳೂರು:  ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷವು ದಲಿತರ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬದಲು ಇರುವ ಅಲ್ಪ ಸ್ವಲ್ಪ ಸೌಲಭ್ಯಗಳನ್ನು ಕಡಿತಗೊಳಿಸಿದೆ. ಸರಳೀಕೃತ ವಿಧಾನವನ್ನು ಅನುಸರಿಸುವ ಬದಲು ಹಲವಾರು ಕ್ಲಷ್ಟ ನೀತಿನಿಯಮಗಳನ್ನು ಅನುಸರಿಸಿ ದಲಿತರಿಗೆ ಸೌಲಭ್ಯ ಪಡೆಯುವುದಕ್ಕೆ ಹರಸಾಹಸವಾಗಿದೆ. ಇತ್ತೀಚೆಗೆ ಮಂಡಿಸಿದ 2021-22ರ ಬಜೆಟ್‍ನಲ್ಲಿ ದಲಿತ ಮೀಸಲು ನಿಧಿಯಲ್ಲಿ ಕಡಿತ ಮಾಡಲಾಗಿದೆ ಎಂದು ದಲಿತ ಹಕ್ಕುಗಳ ಸಮಿತಿ ಹೇಳಿದೆ.

ಈ ಮೊದಲಿನ ಬಾಕಿ ಉಳಿದಿರುವ ಅನುದಾನವನ್ನು ಸಮರ್ಥವಾಗಿ ಉಪಯೋಗಿಸುವ ಬದಲು ದಲಿತೇತರ ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗಿದೆ. ಆದುದರಿಂದ ಮಂಗಳೂರು ಮಹಾನಗರ ಪಾಲಿಕೆಯ ಈ ದಲಿತ ವಿರೋಧಿ, ಸಂವಿಧಾನ ಬಾಹಿರ ಕಾರ್ಯ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ದಲಿತ ಹಕ್ಕುಗಳ ಸಮಿತಿ ಮತ್ತು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನಿರ್ಧರಿಸಿದೆ.  ಈ ಸಂಬಂಧ ನಡೆದ ಸಭೆಯಲ್ಲಿ  ಮಾರ್ಚ್ 3 (01-03-2021)ರಂದು ಪ್ರತಿಭಟನೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ, ದಲಿತ ಹಕ್ಕುಗಳ ಜಿಲ್ಲಾ ಅಧ್ಯಕ್ಷರಾದ ತಿಮ್ಮಯ್ಯ ಕೆ, ನಗರ ಕಾರ್ಯದರ್ಶಿ ಕೃಷ್ಣ ಪಿ.ಪಿ, ಸಾಮ್ಯುವೆಲ್ ಟೈಟಸ್, ರಘುವೀರ್, ಹೇಮಾ, ಪಾಂಡುರಂಗ, ಸುನೀಲ್, ವೆಂಕಟೇಶ್, ಬೇಬಿ ತಣ್ಣೀರುಬಾವಿ ಮೊದಲಾದವರು ಭಾಗವಹಿಸಿದರು.


Provided by

Mn Add

ಇತ್ತೀಚಿನ ಸುದ್ದಿ