ಬಿಜೆಪಿಯು ಜನರು ತಿರುಗಿ ಬಿದ್ದಾಗ ನ್ಯೂನ್ಯತೆ ಮರೆಮಾಚಲು ಧರ್ಮವನ್ನ ಅಸ್ತ್ರವಾಗಿ ಬಳಸುತ್ತದೆ: ಪುತ್ರನ ಹೇಳಿಕೆ ಬೆನ್ನಲ್ಲೇ ಎಂ.ಕೆ.ಸ್ಟಾಲಿನ್ ಹೇಳಿಕೆ
ಭಾರತೀಯ ಜನತಾ ಪಾರ್ಟಿ(BJP)ಯನ್ನು ಜನರು ತರಾಟೆಗೆತ್ತಿಕೊಂಡಾಗ, ಅವರು(ಬಿಜೆಪಿಗರು) ತಮ್ಮ ನ್ಯೂನ್ಯತೆಗಳನ್ನ ಮರೆಮಾಚಲು ಧರ್ಮವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ತಮ್ಮ ಪುತ್ರ ಉದಯ ನಿಧಿ ಸ್ಟಾಲಿನ್ ಅವರು, ಸನಾತನ ಧರ್ಮದ ಅಸಮಾನತೆಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, ಸನಾತನ ಎನ್ನುವುದು ಡೆಂಗ್ಯು, ಮಲೇರಿಯಾ, ಕೊರೋನಾ ಇದ್ದಂತೆ, ರೋಗಿಯ ವಿರುದ್ಧ ಹೋರಾಡಿದರೆ ಸಾಲದು ರೋಗದ ವಿರುದ್ಧ ಹೋರಾಡಬೇಕು ಎನ್ನುವ ಹೇಳಿಕೆಯನ್ನ ನೀಡಿದ ಬಳಿಕ, ಸ್ಪೀಕಿಂಗ್ ಫಾರ್ ಇಂಡಿಯಾ ಎಂಬ ಪಾಡ್ ಕಾಸ್ಟ್ ನಲ್ಲಿ ಧರ್ಮದ ಕುರಿತಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅವರು(BJP) ಜನರ ಧಾರ್ಮಿಕ ಭಾವನೆಗಳ ಬೆಂಕಿಯಲ್ಲಿ ಚಲಿಕಾಯಿಸುತ್ತಾರೆ. ಬಿಜೆಪಿಯು ಭಾರತದ ರಚನೆಗೆ ಅಡ್ಡಿಪಡಿಸಲು ಏಕತೆಯ ಪ್ರಜ್ಞೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ತಮ್ಮ ಮಾತಿನ ಆರಂಭದಲ್ಲೇ ಪ್ರಸ್ತಾಪಿಸಿದರು.
ಬಿಜೆಪಿ ಆಡಳಿತವಿದ್ದ ಗುಜರಾತ್ ನಲ್ಲಿ 2002ರಲ್ಲಿ ನಡೆದ ಹಿಂಸಾಚಾರ, ಹಾಗೂ 2023ರಲ್ಲಿ ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ಅವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿ, ಧಾರ್ಮಿಕ ಮತಾಂಧತೆಯ ಬೆಂಕಿ ಅಮಾಯಕ ಜನರ ಜೀವ ಮತ್ತು ಆಸ್ತಿಯನ್ನು ಬಲಿ ಪಡೆದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.