ಜೈಪುರ-ಆಗ್ರಾ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 11 ಮಂದಿ ಸಾವು
ರಾಜಸ್ಥಾನದ ಭರತ್ ಪುರ ಜಿಲ್ಲೆಯ ಹಂತ್ರಾ ಗ್ರಾಮದ ಬಳಿ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ದುರಂತ ಅಪಘಾತ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 11 ಜನರು ಸಾವನ್ನಪ್ಪಿದ್ದಾರೆ ಮತ್ತು 12 ಜನರು ಗಾಯಗೊಂಡಿದ್ದಾರೆ.
ಬಸ್ ಗುಜರಾತ್ ನ ಭಾವನಗರದಿಂದ ಉತ್ತರ ಪ್ರದೇಶದ ಮಥುರಾಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಟ್ರ್ರಕ್ ಡಿಕ್ಕಿ ಹೊಡೆದಾಗ ಕೆಲವು ಪ್ರಯಾಣಿಕರು ಬಸ್ಸಿನ ಒಳಗೆ ಇದ್ದರೆ, ಕೆಲವರು ಹೊರಗೆ ಇದ್ದರು. ಪೊಲೀಸರು ಶವಗಳನ್ನು ಶವಾಗಾರಕ್ಕೆ ಕಳುಹಿಸಿದ್ದಾರೆ ಮತ್ತು ಗಾಯಗೊಂಡವರನ್ನು ಭರತ್ಪುರದ ಆರ್ ಬಿಎಂ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಪಘಾತದ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಭರತ್ ಪುರ ಎಸ್ಪಿ ಮೃದುಲ್ ಕಚಾವಾ, ನಿಂತಿದ್ದ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 11 ಜನರು ಸಾವನ್ನಪ್ಪಿದ್ದಾರೆ ಮತ್ತು 12 ಜನರು ಗಾಯಗೊಂಡಿದ್ದಾರೆ. ರಾಜಸ್ಥಾನದ ಭರತ್ಪುರದ ಹಂತ್ರಾ ಗ್ರಾಮದ ಬಳಿ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ಗುಜರಾತ್ ನ ಭಾವನಗರದಿಂದ ಉತ್ತರ ಪ್ರದೇಶದ ಮಥುರಾಗೆ ತೆರಳುತ್ತಿದ್ದರು. ದುರಸ್ತಿ ಕಾರ್ಯ ನಡೆಯುತ್ತಿರುವಾಗ ಬಸ್ ಹೆದ್ದಾರಿಯಲ್ಲಿ ನಿಂತಿತ್ತು. ಡಿಕ್ಕಿ ಸಂಭವಿಸಿದಾಗ ಕೆಲವು ಪ್ರಯಾಣಿಕರು ಬಸ್ಸಿನಲ್ಲಿದ್ದರೆ, ಕೆಲವರು ಹೊರಗೆ ನಿಂತಿದ್ದರು ಎಂದು ಮಾಹಿತಿ ನೀಡಿದ್ದಾರೆ.