ರಾಜಕೀಯವಾಗಿ ಹೋರಾಡಲು ಸಾಧ್ಯವಾಗದವರು ಏಜೆನ್ಸಿಗಳನ್ನು ಬಳಸುತ್ತಾರೆ: ಬಿಜೆಪಿಗೆ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಟಾಂಗ್
ಬಂಗಾಳದ ಶಾಲಾ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ, “ರಾಜಕೀಯವಾಗಿ ಹೋರಾಡಲು ಸಾಧ್ಯವಾಗದವರು ಏಜೆನ್ಸಿಗಳನ್ನು ಬಳಸುತ್ತಿದ್ದಾರೆ” ಎಂದು ಆರೋಪಿಸುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಪ್ರತಿಪಕ್ಷಗಳ ಬಣ ಇಂಡಿಯಾದ ಸಭೆಯ ದಿನವಾದ ಬುಧವಾರದಂದೇ ತಮ್ಮನ್ನು ಕರೆಸಿಕೊಳ್ಳುವ ಕೇಂದ್ರ ಏಜೆನ್ಸಿಯ ನಿರ್ಧಾರವನ್ನು ಅವರು ಪ್ರಶ್ನಿಸಿದರು. “ಸೆಪ್ಟೆಂಬರ್ 12 ಅಥವಾ 15 ರಂದು ಇಡಿ ತನ್ನನ್ನು ಕರೆಯಬಹುದಿತ್ತಲ್ವಾ” ಎಂದು ಅವರು ಪ್ರಶ್ನಿಸಿದ್ದಾರೆ. ಇದು ಮುಂದಿನ ಇಂಡಿಯಾ ಬ್ಲಾಕ್ ಸಭೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು ಎಂದರು.
ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಪಾತ್ರ ವಹಿಸುವ ಟಿಎಂಸಿಯನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ ಎಂಬುದು ಈ ಮೂಲಕ ಸಾಬೀತಾಗಿದೆ. ಅವರು ಯಾವುದೇ ಸಮಯದಲ್ಲಿ ಟಿಎಂಸಿಯನ್ನು ತಡೆಯಲು ಬಯಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಅವರ ಪಕ್ಷದ ಪ್ರಧಾನ ಕಾರ್ಯದರ್ಶಿ, ಸಂಸದ ಬ್ಯಾನರ್ಜಿ ಹೇಳಿದರು.
ಇನ್ನು ಈ ಸಂಘಟನೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಅಭಿಷೇಕ್ ಬ್ಯಾನರ್ಜಿ, ಬಿಜೆಪಿ ನಾಯಕರು ಆರೋಪಿಗಳಾಗಿರುವ ಪ್ರಕರಣಗಳಲ್ಲಿ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ನಾರದಾ ಹಗರಣದ ಸಿಬಿಐ ತನಿಖೆ 7 ವರ್ಷಗಳಿಂದ ನಡೆಯುತ್ತಿದ್ದು, ಯಾವುದೇ ಫಲಿತಾಂಶ ಬಂದಿಲ್ಲ. ಬಿಜೆಪಿಗೆ ಸೇರಿದವರಿಗೆ ಸಮನ್ಸ್ ನೀಡುವುದಿಲ್ಲ ಎಂದು ಅವರು ಹೇಳಿದರು, ಕ್ಯಾಮೆರಾದಲ್ಲಿ ಹಣ ತೆಗೆದುಕೊಳ್ಳುವವರನ್ನು ತನಿಖಾ ಸಂಸ್ಥೆಗಳು ಎಂದಿಗೂ ಕರೆಯುವುದಿಲ್ಲ ಎಂದು ಕಿಡಿಕಾರಿದರು.