ನಡು ರಸ್ತೆಯಲ್ಲಿ ಬಾಲಕಿಯ ದುಪ್ಪಟ್ಟಾ ಎಳೆದ ದುಷ್ಕರ್ಮಿಗಳು: ಭೀಕರ ಅಪಘಾತಕ್ಕೆ ಬಾಲಕಿ ಬಲಿ!
ಕಾಲೇಜು ಮುಗಿಸಿ ಬೈಸಿಕಲ್ ನಲ್ಲಿ ಬರುತ್ತಿದ್ದ ಬಾಲಕಿಗೆ ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದು, ಇದೇ ವೇಳೆ ಎದುರಿನಿಂದ ಬಂದ ಬೈಕ್ ವೊಂದು ಬಾಲಕಿಯ ಬೈಸಿಕಲ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಬಾಲಕಿ ಮೃತಪಟ್ಟಿದ್ದಾಳೆ.
ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಈ ಆಘಾತಕಾರಿ ಘಟನೆ ನಡೆದಿದೆ. ಬೈಸಿಕಲ್ ನಲ್ಲಿ ಬಾಲಕಿ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಬಾಲಕರ ಗುಂಪು ಏಕಾಏಕಿ ಬಾಲಕಿಯ ದುಪ್ಪಟ್ಟಾವನ್ನು ಎಳೆದಿದ್ದಾರೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಬೈಸಿಕಲ್ ರಸ್ತೆಯ ವಿರುದ್ಧ ದಿಕ್ಕಿಗೆ ಚಲಿಸಿದ್ದು, ಎದುರಿನಿಂದ ವೇಗವಾಗಿ ಬಂದ ಬೈಕೊಂದು ಬೈಸಿಕಲ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಹನ್ಸ್ವಾರ್ ಪೊಲೀಸ್ ಠಾಣೆ ಪ್ರದೇಶದ ಶಹಬಾಜ್ ಮತ್ತು ಅವನ ಸಹೋದರ ಅರ್ಬಾಜ್ ಕೃತ್ಯ ನಡೆಸಿದ ದುಷ್ಕರ್ಮಿಗಳಾಗಿದ್ದು, ಇವರನ್ನು ಬಂಧಿಸಲು ಸ್ಥಳಕ್ಕೆ ಪೊಲೀಸರು ತೆರಳಿದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಇಬ್ಬರ ಕಾಲಿಗೂ ಗುಂಡು ಹಾರಿಸಿ ಬಳಿಕ ಬಂಧಿಸಿದ್ದಾರೆ. ಗಾಯಗೊಂಡ ಆರೋಪಿಗಳನ್ನು ಪೊಲೀಸರು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://x.com/sanjayjourno/status/1702994085009887263?s=20