ಆಕ್ರೋಶ: ಚಂದ್ರಬಾಬು ನಾಯ್ಡು ಅವರ ಜೀವನವನ್ನು ಜೈಲಿನಲ್ಲಿ ಕೊನೆಗೊಳಿಸಲು ಪಿತೂರಿ ನಡೆಸಲಾಗಿದೆ: ಪುತ್ರ ಲೋಕೇಶ್ ಗಂಭೀರ ಆರೋಪ
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿರುವ ತಮ್ಮ ತಂದೆ ಮತ್ತು ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರ ಜೀವನವನ್ನು ಕೊನೆಗೊಳಿಸಲು ಪಿತೂರಿ ನಡೆಸಲಾಗಿದೆ ಎಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಆರೋಪಿಸಿದ್ದಾರೆ. ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ರಿಮಾಂಡ್ ಖೈದಿಯೊಬ್ಬರು ಡೆಂಗ್ಯೂ ಜ್ವರಕ್ಕೆ ಬಲಿಯಾದ ನಂತರ ಟಿಡಿಪಿ ಮುಖ್ಯಸ್ಥರ ಪುತ್ರ ಈ ಆರೋಪ ಮಾಡಿದ್ದಾರೆ.
ಕೌಶಲ್ಯ ಅಭಿವೃದ್ಧಿ ನಿಗಮದಿಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ನಾಯ್ಡು ಅವರನ್ನು ಸೆಪ್ಟೆಂಬರ್ 9 ರಂದು ಬಂಧಿಸಲಾಗಿತ್ತು. ಇದು ರಾಜ್ಯ ಸರ್ಕಾರಕ್ಕೆ 300 ಕೋಟಿ ರೂ.ಗಿಂತ ಹೆಚ್ಚು ನಷ್ಟಕ್ಕೆ ಕಾರಣವಾಯಿತು. ಪ್ರಸ್ತುತ ಅವರು ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ 14 ದಿನಗಳ ರಿಮಾಂಡ್ ಅನುಭವಿಸುತ್ತಿದ್ದಾರೆ.
“ರಾಜಮುಂಡ್ರಿ ಗ್ರಾಮೀಣ ಮಂಡಲದ ದೌಲೇಶ್ವರಂನ ರಿಮಾಂಡ್ ಖೈದಿ ಗಂಜೇಟಿ ವೀರ ವೆಂಕಟ ಸತ್ಯನಾರಾಯಣ ಡೆಂಗ್ಯೂಗೆ ಬಲಿಯಾಗಿದ್ದಾರೆ. ಬಾಬು (ಚಂದ್ರಬಾಬು ನಾಯ್ಡು) ಅವರನ್ನು ಇದೇ ರೀತಿಯ ಗತಿಯನ್ನು ಅನುಭವಿಸಲು ಪಿತೂರಿ ನಡೆಸಲಾಗಿದೆ” ಎಂದು ಲೋಕೇಶ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಯ್ಡು ಅವರಿಗೆ ಯಾವುದೇ ಹಾನಿ ಸಂಭವಿಸಿದರೆ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ದೂರಿದರು. ಅಲ್ಲದೇ ತನ್ನ ತಂದೆಯಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಅವರು ಆರೋಪಿಸಿದರು.
ಲೋಕೇಶ್ ಅವರ ಪ್ರಕಾರ, ನಾಯ್ಡು ಅವರ ಜೀವನವನ್ನು ಜೈಲಿನಲ್ಲಿ ಕೊನೆಗೊಳಿಸಲು ಪಿತೂರಿ ನಡೆಸಲಾಗಿದೆ ಮತ್ತು ಸಾಕ್ಷ್ಯಾಧಾರಗಳಿಲ್ಲದ ಪ್ರಕರಣದಲ್ಲಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಹೇಳಿದರು. ಅಲ್ಲದೇ ನಾಯ್ಡು ಅವರನ್ನು ಬಂಧಿಸಿಟ್ಟಿರಿವ ಜೈಲು ಸೊಳ್ಳೆಗಳಿಂದ ತುಂಬಿದೆ ಎಂದು ಅವರು ಆರೋಪಿಸಿದ್ದಾರೆ.