ಮೋದಿ ಕುರಿತ ಸಾಕ್ಷ್ಯಚಿತ್ರ ಪ್ರಸಾರ ಹಿನ್ನೆಲೆ: ಬಿಬಿಸಿಗೆ ಹೊಸ ನೋಟಿಸ್ ಜಾರಿ ಮಾಡಿದ ದಿಲ್ಲಿ ಹೈಕೋರ್ಟ್
‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರದ ಕುರಿತು ಗುಜರಾತ್ ಮೂಲದ ಎನ್ಜಿಒ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ದೆಹಲಿ ಹೈಕೋರ್ಟ್ ಬಿಬಿಸಿಗೆ ಹೊಸ ನೋಟಿಸ್ ಜಾರಿ ಮಾಡಿದೆ.
ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರ ದೇಶದ ಪ್ರತಿಷ್ಠೆಗೆ ಧಕ್ಕೆ ತರಲಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾನಹಾನಿ ಮಾಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಎನ್ಜಿಒ ಜಸ್ಟೀಸ್ ಆನ್ ಟ್ರಯಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಅವರು, ಬಿಬಿಸಿ ಬ್ರಿಟನ್ ಮತ್ತು ಬಿಬಿಸಿ(ಇಂಡಿಯಾ)ಗೆ ಹೊಸ ನೋಟಿಸ್ ಮಾಡಿದ್ದು ಡಿಸೆಂಬರ್ 15ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸಾಕ್ಷ್ಯಚಿತ್ರ ಪ್ರಸಾರದಿಂದಾಗಿ ಪ್ರಧಾನಿ ಮೋದಿ, ಭಾರತ ಸರ್ಕಾರ, ರಾಜ್ಯ ಸರ್ಕಾರಕ್ಕೆ ಉಂಟಾದ ಖ್ಯಾತಿ ಮತ್ತು ಸೌಹಾರ್ದತೆಯ ನಷ್ಟದ ಕಾರಣಕ್ಕಾಗಿ ಎನ್ಜಿಒ ಪ್ರತಿವಾದಿಗಳ ವಿರುದ್ಧ 10,000 ಕೋಟಿ ರೂಪಾಯಿಗಳ ನಷ್ಟ ಕೋರಿದೆ.
ಇದಕ್ಕೂ ಮೊದಲು ಮೇ 3ರಂದು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಬಿಜೆಪಿ ನಾಯಕ ಬಿನಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯವು ಬಿಬಿಸಿ, ವಿಕಿಮೀಡಿಯಾ ಫೌಂಡೇಶನ್ ಮತ್ತು ಯುಎಸ್ ಮೂಲದ ಇಂಟರ್ನೆಟ್ ಆರ್ಕೈವ್ಗೆ ಸಮನ್ಸ್ ಜಾರಿ ಮಾಡಿತ್ತು.