ದೇಗುಲದಲ್ಲಿ ಪ್ರಸಾದ ತಿಂದಿದ್ದೇ ತಪ್ಪಂತೆ: ಕಳ್ಳತನದ ಆರೋಪ ಹೊರಿಸಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು
ದೆಹಲಿಯ ಸುಂದರ್ ನಗರಿ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಪ್ರಸಾದ ತಿಂದಿದ್ದನ್ನೇ ತಪ್ಪು ಎಂದು ಹೇಳಿ ಅಂಗವಿಕಲ ಮುಸ್ಲಿಂ ವ್ಯಕ್ತಿಯನ್ನು ಕಟ್ಟಿ ಹಾಕಿ ಥಳಿಸಿ ಕೊಂದ ಘಟನೆ ನಡೆದಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ.
ಮೃತ ವ್ಯಕ್ತಿಯನ್ನು ಮುಹಮ್ಮದ್ ಇಸಾರ್ ಎಂದು ಗುರುತಿಸಲಾಗಿದೆ. ಇವರನ್ನು ಕಂಬಕ್ಕೆ ಕಟ್ಟಿ ಹಾಕಿ ಜನರ ಗುಂಪೊಂದು ಥಳಿಸಿದೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾರೆ.
ಇನ್ನು ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇದರಲ್ಲಿ ಗುಂಪೊಂದು ವ್ಯಕ್ತಿಯ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡುತ್ತಿರುವುದು ಕಂಡುಬಂದಿದೆ.
ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಫೋನ್ಗಳಲ್ಲಿ ಚಿತ್ರೀಕರಿಸಿದ ವೀಡಿಯೊಗಳ ಮೂಲಕ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನ ತಂದೆ ಅಬ್ದುಲ್ ವಾಜಿದ್ ನೀಡಿದ ದೂರಿನ ಪ್ರಕಾರ, ಮಂಗಳವಾರ ಸಂಜೆ ತನ್ನ ಮಗ ಮನೆಯ ಹೊರಗೆ ಗಾಯಗಳೊಂದಿಗೆ ಬಿದ್ದಿದ್ದ. ಯುವಕರ ಗುಂಪು ಈತನ ಮೇಲೆ ಕಳ್ಳತನದ ಆರೋಪ ಹೊರಿಸಿ, ಕಂಬಕ್ಕೆ ಕಟ್ಟಿ, ಕೋಲುಗಳಿಂದ ಥಳಿಸಿದೆ ಎಂದು ಇಸ್ರಾರ್ ತನ್ನ ತಂದೆಗೆ ತಿಳಿಸಿದ್ದಾನೆ. ಹಲ್ಲೆಗೊಳಗಾಗಿದ್ದ ಇಸ್ರಾರ್ ನನ್ನು ಅವನ ಮನೆಗೆ ನೆರೆಹೊರೆಯ ವ್ಯಕ್ತಿ ಕರೆತಂದಿದ್ದಾನೆ. ಇದೇ ವೇಳೆ ಇಸ್ರಾರ್ ತನ್ನ ತಂದೆಗೆ ದಾಳಿಕೋರರ ಬಗ್ಗೆ ವಿವರಗಳನ್ನು ನೀಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಇಸ್ರಾರ್ ನಂತರ ಸಾವನ್ನಪ್ಪಿದ್ದಾನೆ.
ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಮೊಬೈಲ್ ಗಳಲ್ಲಿ ಚಿತ್ರೀಕರಿಸಿದ ವೀಡಿಯೊಗಳ ಮೂಲಕ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.