ಚೆನ್ನೈ ಮೂಲದ ಅರವಳಿಕೆ ತಜ್ಞೆ ಅನುಮಾನಾಸ್ಪದವಾಗಿ ಸಾವು!

ಚಾಮರಾಜನಗರ: ಅರವಳಿಕೆ ತಜ್ಞೆಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಇಂದು ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಅರವಳಿಕೆ ತಜ್ಞೆ ಡಾ.ಸಿಂಧುಜಾ(28) ಮೃತ ದುರ್ದೈವಿ. ಇಂದು ಕರ್ತವ್ಯಕ್ಕೆ ಹಾಜರಾಗದೇ ಇದ್ದಿದ್ದರಿಂದ ಸಹೋದ್ಯೋಗಿಗಳು ಮನೆಗೆ ತೆರಳಿ ನೋಡಿದ ವೇಳೆ ಮೃತಪಟ್ಟಿರುವುದು ಗೊತ್ತಾಗಿದೆ.
ಸಿಂಧುಜಾ ಮೂಲತಃ ಚೆನ್ನೈನವರಾಗಿದ್ದು ಎಂಬಿಬಿಎಸ್ ಕೋರ್ಸ್ ಮುಗಿಸಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದರು. ಶಿಕ್ಷಣದ ಭಾಗವಾಗಿ ಕೊಳ್ಳೇಗಾಲದಲ್ಲಿ ಅರವಳಿಕೆ ವಿಭಾಗದಲ್ಲಿ ಕಾರ್ಯನಿರ್ವಾಹಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸಿಂಧುಜಾ ಅವರ ಮೃತದೇಹ ನೆಲದ ಮೇಲೆ ಬಿದ್ದಿದ್ದು ಪಕ್ಕದಲ್ಲೇ ಸಿರಿಂಜ್, ಔಷಧಿ, ಚಾಕು ಇನ್ನಿತರ ವಸ್ತುಗಳಿದ್ದವು. ಸಿಂಧುಜಾ ಅವರಿಗೆ ಮುಂದಿನ ಜನವರಿಯಲ್ಲಿ ಮದುವೆ ಕೂಡ ನಿಶ್ಚಯವಾಗಿತ್ತು ಎಂದು ಮೂಲಗಳು ತಿಳಿಸಿವೆ. ಮೃತರ ಪೋಷಕರು ಚೆನೈನಿಂದ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗುಂಡ್ಲುಪೇಟೆಯಲ್ಲಿ ದರೋಡೆ:
ಕೇರಳ ಮೂಲದ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿದ ಗುಂಪೊಂದು 44 ಲಕ್ಷ ರೂ. ದರೋಡೆ ಮಾಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಅಗತಗೌಡನಹಳ್ಳಿ ಸಮೀಪದಲ್ಲಿ ಬುಧವಾರ ತಡರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೇರಳ ಮೂಲದ ಚಿನ್ನದ ವ್ಯಾಪಾರಿ ರಹೀಂ ಮತ್ತು ಆತನ ಸ್ನೇಹಿತ ನೌಫಾಜ್ ಇಬ್ಬರು ಮೈಸೂರಿನಲ್ಲಿ ಚಿನ್ನ ಮಾರಾಟ ಮಾಡಿ ಹಣ ತೆಗೆದುಕೊಂಡು ಕೇರಳಕ್ಕೆ ತೆರಳುತ್ತಿದ್ದ ವೇಳೆ ಕೇರಳ ಮೂಲದ ದರೋಡೆಕೋರರ ಸುಮಾರು 10 ಮಂದಿಯ ಗುಂಪೊಂದು ಎರಡು ಕಾರು ಹಾಗು ಒಂದು ಲಾರಿಯಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿ ಅಗತಗೌಡನಹಳ್ಳಿ ಸಮೀಪ ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ ವ್ಯಾಪಾರಿಗೆ ಥಳಿಸಿ ಆತನ ಬಳಿಯಿದ್ದ ಹಣವನ್ನು ದೋಚಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ನೌಫಾಜ್ ಇಳಿದು ಓಡಿ ಹೋಗಿದ್ದಾರೆ. ನಂತರ ಚಿನ್ನದ ವ್ಯಾಪಾರಿ ಬೇಗೂರು ಪೊಲೀಸ್ ಠಾಣೆಗೆ ಆಗಮಿಸಿ, ದರೋಡೆ ಸಂಬಂಧ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೇಗೂರು ಠಾಣೆ ಪೊಲೀಸ್ ತನಿಖೆ ಆರಂಭಿಸಿ, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.