ಇಸ್ರೇಲ್-ಫೆಲೆಸ್ತೀನ್ ಸಂಘರ್ಷ: ಶಾಂತಿಯುತ ಪರಿಹಾರಕ್ಕೆ ಭಾರತದ ಮಧ್ಯಪ್ರವೇಶ ಅಗತ್ಯ: ಫೆಲೆಸ್ತೀನ್ ರಾಯಭಾರಿ ಅಬು ಅಲ್ ಹೈಜಾ ಮನವಿ
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷದಲ್ಲಿ ಭಾರತದ ಮಧ್ಯಪ್ರವೇಶಕ್ಕೆ ಭಾರತದಲ್ಲಿನ ಪ್ಯಾಲೆಸ್ತೀನ್ ರಾಯಭಾರಿ ಅದ್ನಾನ್ ಅಬು ಅಲ್ ಹೈಜಾ ಕರೆ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಯುದ್ಧದ ಜವಾಬ್ದಾರಿಯನ್ನು ಅಂತರರಾಷ್ಟ್ರೀಯ ಸಮುದಾಯವು ಹೊಂದಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಮಧ್ಯಪ್ರವೇಶಿಸಲು, ಮಧ್ಯಸ್ಥಿಕೆ ವಹಿಸಲು ಮತ್ತು ಸಹಾಯ ಮಾಡಲು ಭಾರತವನ್ನು ಒತ್ತಾಯಿಸಿದ್ದಾರೆ.
ಇಸ್ರೇಲಿ ನಗರಗಳ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿ ಮತ್ತು ನಂತರದ ಇಸ್ರೇಲಿ ಪ್ರತೀಕಾರದಿಂದಾಗಿ ಸಂಘರ್ಷವು ಈಗಾಗಲೇ ಸುಮಾರು 1,600 ಸಾವುನೋವುಗಳಿಗೆ ಕಾರಣವಾಗಿದೆ. ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ ಫೆಲೆಸ್ತೀನ್ ರಾಯಭಾರಿಯು ಭಾರತದ ಪಾಲ್ಗೊಳ್ಳುವಿಕೆಯನ್ನು ಬಯಸಿದ್ದಾರೆ.
“ವಿಶ್ವಸಂಸ್ಥೆಯು ಫೆಲೆಸ್ತೀನ್ ಕುರಿತು 800 ನಿರ್ಣಯಗಳನ್ನು ಅಂಗೀಕರಿಸಿದೆ. ಇಸ್ರೇಲ್ ಯಾವುದನ್ನೂ ಜಾರಿಗೆ ತಂದಿಲ್ಲ. ಫೆಲೆಸ್ತೀನ್ ಆಕ್ರಮಿತ ಪ್ರದೇಶಗಳ ಮೇಲಿನ ನಿಯಂತ್ರಣವನ್ನು ಇಸ್ರೇಲ್ ಕೊನೆಗೊಳಿಸಿದರೆ ದಾಳಿಗಳು ಸಹ ಕೊನೆಗೊಳ್ಳುತ್ತವೆ” ಎಂದು ಫೆಲೆಸ್ತೀನ್ ರಾಯಭಾರಿ ಹೇಳಿದರು.
ಫೆಲೆಸ್ತೀನ್ ನಾಗರಿಕರನ್ನು ಗುರಿಯಾಗಿಸುವುದನ್ನು ನೇರವಾಗಿ ವಿರೋಧಿಸುತ್ತದೆ. ಈ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರವನ್ನು ಬಯಸುತ್ತದೆ. ಮಾತುಕತೆಗಳಿಗೆ ಅನುಕೂಲವಾಗುವಂತೆ ನಮ್ಮ ಅಧ್ಯಕ್ಷರು ಹಲವಾರು ಯುರೋಪಿಯನ್ ದೇಶಗಳನ್ನು ಸಂಪರ್ಕಿಸಿದ್ದಾರೆ. ಎರಡೂ ಪಕ್ಷಗಳೊಂದಿಗಿನ ಭಾರತದ ನಿಕಟ ಸಂಬಂಧವನ್ನು ಗಮನಿಸಿದರೆ, ಭಾರತವು ಮಧ್ಯಪ್ರವೇಶಿಸಿ ಮಾತುಕತೆ ಪ್ರಕ್ರಿಯೆಯಲ್ಲಿ ಸಹಾಯ ಮಾಡಬಹುದು ಎಂದು ನಾವು ಭಾವಿಸುತ್ತೇವೆ. ಅದು ನಮ್ಮ ಪ್ರಾಮಾಣಿಕ ಬಯಕೆ” ಎಂದು ಅಬು ಅಲ್ಹೈಜಾ ಎನ್ ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.