ಶಾಲೆಗೆ ಚಕ್ಕರ್ ಹಾಕಿ ಈಜಲು ತೆರಳಿದವರು ಶವವಾಗಿ ಪತ್ತೆ: ಜಾರ್ಖಂಡ್ ನಲ್ಲಿ ನಡೀತು ಮನಕಲಕುವ ಘಟನೆ
18/10/2023
ಶಾಲೆಗೆ ಚಕ್ಕರ್ ಹಾಕಿ ಈಜಲೆಂದು ತೆರಳಿದ್ದ ಆರು ಮಂದಿ ಶಾಲಾ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ಹಜಾರಿಬಾಗ್ ನಲ್ಲಿ ನಡೆದಿದೆ. ಲೋಟ್ವಾ ಅಣೆಕಟ್ಟಿನ ಬಳಿ ಈಜಲೆಂದು 12 ನೇ ತರಗತಿ ವಿದ್ಯಾರ್ಥಿಗಳು ತೆರಳಿದ್ದರು. ಎಲ್ಲರೂ 17-18 ವಯಸ್ಸಿನವರು.
ಮೃತರನ್ನು ರಜನೀಶ್ ಪಾಂಡೆ, ಸುಮಿತ್ ಕುಮಾರ್, ಮಯಾಂಕ್ ಸಿಂಗ್, ಪ್ರವೀಣ್ ಗೋಪೆ, ಇಶಾನ್ ಸಿಂಗ್ ಮತ್ತು ಶಿವಸಾಗರ್ ಸಿಂಗ್ ಎಂದು ಗುರುತಿಸಲಾಗಿದೆ. ಏಳು ಜನ ಈಜಲು ಬಂದಿದ್ದು ಒಬ್ಬ ವಿದ್ಯಾರ್ಥಿ ಮಾತ್ರ ಪಾರಾಗಿದ್ದಾನೆ. ಆರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಶೇಖ್ ಭಿಖಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಎಸ್ಪಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಯೇ ಮನೆಯಿಂದ ಹೊರಟು ತರಗತಿಗಳಿಗೆ ಹಾಜರಾಗದೆ ಈಜಲು ತೆರಳಿದ್ದರು ಎಂದು ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ.