ಅಡುಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ: ಬಾಣಸಿಗ ಸಾವು
18/10/2023
ಮಣಿಪಾಲ: ಪರ್ಕಳ ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಭಾಜಕದ ಬಳಿ ಬೈಕ್ ಸವಾರರೊಬ್ಬರು ಅಪಘಾತದಿಂದ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ.
ಮಣಿಪಾಲ ಪೋಲಿಸ್ ಠಾಣೆಯ ಪೋಲಿಸರು ಘಟನಾ ಸ್ಥಳಕ್ಕೆ ಬಂದು ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಕೆ.ಎಂ ಸಿಯ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾದರು.
ಮೃತ ಯುವಕ ಹಿರಿಯಡ್ಕದ ನಿವಾಸಿ ಅಕ್ಷಯ ಭಟ್ (26) ಎಂದು ತಿಳಿದುಬಂದಿದೆ. ಯುವಕ ಅವಿಹಾಹಿತನಾಗಿದ್ದು, ಅಡುಗೆ ವೃತ್ತಿ ಮಾಡಿಕೊಂಡಿದ್ದರು. ಇಂದ್ರಾಳಿಯ ದೇವಸ್ಥಾನವೊಂದರಲ್ಲಿ ನವರಾತ್ರಿಯ ಸಾರ್ವಜನಿಕ ಅನ್ನಸಂತರ್ಪಣೆ ಅಡುಗೆ ಕೆಲಸ ನಿರ್ವಹಿಸಲು ಮನೆಯಿಂದ ಬರುವ ಸಮಯ ಈ ದುರ್ಘಟನೆ ನಡೆದಿದೆ.