ಮುಸ್ಲಿಮ್ ವ್ಯಾಪಾರಿಗಳ ವಿರುದ್ಧ ಕರೆ: ಶರಣ್ ಪಂಪ್ ವೆಲ್ ಬಂಧನಕ್ಕೆ ಸಮಾನ ಮನಸ್ಕರ ಜಂಟಿ ವೇದಿಕೆ ಆಗ್ರಹ - Mahanayaka
1:14 AM Saturday 21 - September 2024

ಮುಸ್ಲಿಮ್ ವ್ಯಾಪಾರಿಗಳ ವಿರುದ್ಧ ಕರೆ: ಶರಣ್ ಪಂಪ್ ವೆಲ್ ಬಂಧನಕ್ಕೆ ಸಮಾನ ಮನಸ್ಕರ ಜಂಟಿ ವೇದಿಕೆ ಆಗ್ರಹ

sharan pompwel
18/10/2023

ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವ ಮಂಗಳೂರಿನ ಎಲ್ಲಾ ಸಮುದಾಯಗಳು ಸಂಭ್ರಮಿಸುವ ಹಬ್ಬವಾಗಿ ಕಳೆದ ಶತಮಾನದಿಂದಲೇ ಖ್ಯಾತಿ ಪಡೆದಿದೆ. ದಸರಾದ ಕೊನೆಯ ದಿನ ತುಳುನಾಡಿನಾದ್ಯಂತ ಮಾರ್ನಮಿ ಹುಲಿವೇಷ ತಂಡಗಳು ಜಳಕ (ವೇಷ ಕಳಚುವ) ಕಾರ್ಯಕ್ರಮಕ್ಕಾಗಿ ಮಂಗಳಾ ದೇವಿ ದೇವಸ್ಥಾನದ ಉತ್ಸವಕ್ಕೆ ಆಗಮಿಸುತ್ತದೆ. ಅಂದು ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ತುಳುನಾಡಿನ ಎಲ್ಲಾ ಜಾತಿ, ಧರ್ಮಗಳ ಜನ ಅಲ್ಲಿ ಸೇರಿ ಸಂಭ್ರಮಿಸುವುದು ಅನಾದಿ ಕಾಲದಿಂದಲೂ ನಡೆದಕೊಂಡು ಬಂದಿದೆ. ಅಲ್ಲಿ ಸೇರುವ ಜನರು, ಅಲ್ಲಿ ನೆರೆಯುವ ಸಂತೆಗೆ ಯಾವುದೇ ಧರ್ಮ, ಜಾತಿ, ಪಂಗಡಗಳ ಹಂಗು, ರಂಗು ಯಾವತ್ತೂ ಇರಲಿಲ್ಲ. ಮುಸ್ಲಿಂ ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಮಂಗಳಾ ದೇವಿ ದಸರಾ ಹುಲಿ ವೇಷಗಳು, ಬಣ್ಣದ ಬೆಳಕು, ಸಂತೆಗಳನ್ನು ನೋಡಲು ನಿರ್ಭಯವಾಗಿ ಭಾಗಿಗಳಾಗುವುದು ಮಂಗಳಾದೇವಿ ದೇವಳ, ಹಾಗೂ ಅಲ್ಲಿನ ದಸರಾ ಉತ್ಸವದ ಸೌಹಾರ್ದತೆ, ಜಾತಿ, ಧರ್ಮಗಳನ್ನು ಮೀರಿ ಒಳಗೊಳ್ಳುವ ಗುಣಕ್ಕೆ ಸಾಕ್ಷಿ.

ಇಂತಹ ಬಹುದೊಡ್ಡ ಖ್ಯಾತಿಯುಳ್ಳ ಕ್ಷೇತ್ರ ಹಾಗೂ ಆ ಕ್ಷೇತ್ರದ ಪ್ರಖ್ಯಾತ ದಸರಾ ಉತ್ಸವವನ್ನೇ ಗುರಿಯಾಗಿಸಿ ವಿಎಚ್ ಪಿ, ಬಜರಂಗ ದಳವನ್ನು ಚೂ  ಬಿಟ್ಟು ಮತೀಯ ಸೌಹಾರ್ದತೆಯನ್ನು ಕದಡುವ ಕೆಲಸ ಬಹಿರಂವಾಗಿಯೇ ನಡೆಯತೊಡಗಿದೆ. ಅದರ ಭಾಗವಾಗಿಯೇ ಮುಸ್ಲಿಂ ಜಾತ್ರೆ ವ್ಯಾಪಾರಿಗಳಿಗೆ ಮಂಗಳಾದೇವಿ ದಸರಾ ಸಂತೆಯಲ್ಲಿ ಬೀದಿ ಬದಿಯಲ್ಲಿ ಅಂಗಡಿ ಮಳಿಗೆ ನೀಡದಂತೆ ದೇವಸ್ಥಾನ ಆಡಳಿತ ಮಂಡಳಿಗೆ ಮನವಿ ಮಾದರಿಯಲ್ಲಿ ಬೆದರಿಕೆ ಪತ್ರ ನೀಡಲಾಯಿತು. ಆ ಮೂಲಕ ಜನರ ನಡುವೆ ಗೊಂದಲ ಮೂಡಿಸಲು ಯತ್ನಿಸಲಾಯಿತು. ಜಿಲ್ಲಾಡಳಿತದ ಮಧ್ಯಪ್ರವೇಶದ ನಂತರ ಆ ಪ್ರಯತ್ನ ವಿಫಲಗೊಂಡು ಹಿನ್ನಡೆ ಅನುಭವಿಸಿ ನಂತರ ಮಂಗಳಾ ದೇವಿ ದೇವಸ್ಥಾನದ ಮುಂಭಾಗದ ನಗರ ಪಾಲಿಕೆ ಜಾಗದಲ್ಲಿ  ಹಾಕಲಾದ ಜಾತ್ರೆ ವ್ಯಾಪಾರದ ಸ್ಟಾಲ್ ಗಳಲ್ಲಿ ಹಿಂದು ಧರ್ಮೀಯ ವ್ಯಾಪಾರಿಗಳ ಮಳಿಗೆಗಳನ್ನು ಹುಡುಕಿ ಬಲವಂತವಾಗಿ ಕೇಸರಿ ಧ್ವಜ ಕಟ್ಟುವ ಆ ಮೂಲಕ ಮುಸ್ಲಿಂ ವ್ಯಾಪಾರಿಗಳನ್ನು ಪ್ರತ್ಯೇಕಿಸುವ, ಕೇಸರಿ ಬಾವುಟ ಕಟ್ಟಿರುವ ಮಳಿಗೆಗಳಲ್ಲಿ ಮಾತ್ರ ಹಿಂದುಗಳು ಖರೀದಿ ನಡೆಸುವಂತೆ ಮುಸ್ಲಿಂ ಸಂತೆ ವ್ಯಾಪಾರಿಗಳೊಂದಿಗೆ ವ್ಯಾಪಾರ ನಡೆಸದೆ ಬಹಿಷ್ಕಾರ ಹಾಕುವಂತೆ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಬಜರಂಗ ದಳದ ಮುಖಂಡರು ಬಹಿರಂಗ ಕರೆ ನೀಡಿದ್ದಾರೆ.

ಇದು ಸಂವಿಧಾನದ ನಿಯಮಗಳ, ಕ್ರಿಮಿನಲ್ ಕಾನೂನುಗಳ ಸ್ಪಷ್ಟ ಉಲ್ಲಂಘನೆ. ಸಮುದಾಯವೊಂದನ್ನು ಬಹಿಷ್ಕರಿಸುವುದು, ಬಹಿರಂಗವಾಗಿ ಬಹಿಷ್ಕಾರಕ್ಕೆ ಕರೆ ನೀಡುವುದು ಜಾಮೀನು ರಹಿತ ಅಪರಾಧವಾಗಿದೆ. ಶರಣ್ ಪಂಪ್ ವೆಲ್ ನೇತೃತ್ವದ ಬಜರಂಗ ದಳದ ಕುಖ್ಯಾತ ಗ್ಯಾಂಗ್ ಪದೇ ಪದೆ ಇಂತಹ ಸೌಹಾರ್ದ ಕದಡುವ, ದ್ವೇಷ ಹರಡುವ ಕ್ರಿಮಿನಲ್ ಕೃತ್ಯಗಳನ್ನು ಎಸಗುತ್ತಲೇ ಬಂದಿದೆ. ಆದರೆ, ಕಾನೂನು ಪಾಲಕರು ಈ ಕುರಿತು ತೀರಾ ಮೃದು ಧೋರಣೆ ತಳೆಯುತ್ತಿರುವುದು ಜನಸಾಮಾನ್ಯರಲ್ಲಿ ಶಾಂತಿ ಕದಡುವ ಆತಂಕಕ್ಕೆ ಕಾರಣವಾಗಿದೆ. ಕೋಮುವಾದಿ ಕ್ರಿಮಿನಲ್ ಗಳು ತಮ್ಮ ಗೂಂಡಾಗಿರಿಯನ್ನು ಎಗ್ಗಿಲ್ಲದೆ ಮುಂದುವರಿಸಲು ಅವಕಾಶ ಒದಗಿಸಿದೆ. ಈ ಬಾರಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ಇತಿಹಾಸ ಪ್ರಸಿದ್ದ ಮಂಗಳಾದೇವಿ ದೇವಳದ ದಸರಾ ಉತ್ಸವವನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಇಂತಹ ಗಂಭೀರ ಪ್ರಕರಣವನ್ನು ಲಘುವಾಗಿ ಕಾಣಬಾರದು, ಕಾನೂನಿನ ಕಠಿಣ ನಿಯಮಗಳಡಿ ತಕ್ಷಣವೇ ಪ್ರಕರಣ ದಾಖಲಿಸಿ ಶರಣ್ ಪಂಪ್ ವೆಲ್ ಮತ್ತು ಅವರ ಜೊತೆಗಾರರಾದ ಕ್ರಿಮಿನಲ್ ಗುಂಪುನ್ನು ಬಂಧಿಸಿ ಜೈಲಿಗಟ್ಟ ಬೇಕು ಎಂದು “ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ” ಬಲವಾಗಿ ಆಗ್ರಹಿಸುತ್ತದೆ. ಇಂತಹ ಕ್ರಮಗಳಿಲ್ಲದೆ ಮುಂದಕ್ಕೆ ಶಾಂತಿ ಕದಡುವ ಘಟನೆಗಳು ಜರುಗಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ವೇದಿಕೆ ಎಚ್ಚರಿಸಿದೆ.


Provided by

ಮುಂಬರುವ ಲೋಕಸಭೆ ಚುನಾವಣೆಯ ಸಿದ್ದತೆಯ ಭಾಗವಾಗಿಯೇ ಈ ಎಲ್ಲಾ ಘಟನೆಗಳು ನಡೆಯುತ್ತಿವೆ. ಶರಣ್ ಪಂಪ್ ವೆಲ್ ಸೇರಿದಂತೆ ಬಜರಂಗ ದಳದ ಕಾರ್ಯಕರ್ತರನ್ನು ಚೂ ಬಿಟ್ಟು ಬಿಜೆಪಿ ಮತೀಯ ಉದ್ವಿಗ್ನತೆ ಕೆರಳಿಸಲು, ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣಕ್ಕೆ ಬಿಜೆಪಿ ಇಂತಹ ಅಪಾಯಕಾರಿ ಅಟಕ್ಕೆ ಮುಂದಾಗಿದೆ. ಸೌಹಾರ್ದತೆಗೆ ಮಾದರಿಯಾಗಿರುವ ಮಂಗಳಾ ದೇವಿ ದೇವಳದ ದಸರಾದಲ್ಲಿ ಯಶಸ್ಸು ಕಂಡರೆ ಮುಂಬರುವ ಚುನಾವಣೆಯವರಗೆ ಎಲ್ಲಾ ಧಾರ್ಮಿಕ, ಸಾಂಸ್ಕ್ರತಿಕ ಉತ್ಸವಗಳಲ್ಲಿ ಇದೇ ಮಾದರಿಯನ್ನು ಬಿಜೆಪಿ ಅನುಸರಿಸಲಿದೆ. ವಿಫಲ ಅಡಳಿತ, ಜನರ ವಿರೋಧ ಕಟ್ಟಿಕೊಂಡಿರುವ ಬಿಜೆಪಿ ಚುನಾವಣಾ ಗೆಲುವಿಗಾಗಿ ಮಂಗಳಾ ದೇವಿ ದೇವಸ್ತಾನ, ದಸರಾ ಉತ್ಸವದಂತಹ ಪವಿತ್ರ ಕ್ಷೇತ್ರ, ಉತ್ಸವಗಳ ಹೆಸರು ಕೆಡಿಸಲು ಮುಂದಾಗಿದೆ. ತುಳುನಾಡಿನ ಜನತೆ ಇಂತಹ ಕೆಟ್ಟ, ದುರಾಲೋಚನೆಯ ರಾಜಕಾರಣವನ್ನು ಒಗ್ಗಟ್ಟಿನಿಂದ ತಿರಸ್ಕರಿಸಬೇಕು, ಐಕ್ಯತೆ, ಸೌಹಾರ್ದತೆಯ ಪರಂಪರೆಯನ್ನು ಎತ್ತಿಹಿಡಿಯಬೇಕು ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಮಿತಿ ಸದಸ್ಯರುಗಳಾದ

ಕೆ ಯಾದವ ಶೆಟ್ಟಿ, (ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ), ಯಶವಂತ ಮರೋಳಿ ( ಜಿಲ್ಲಾಧ್ಯಕ್ಷರು, ಅಖಿಲ ಭಾರತ ವಕೀಲರ ಸಂಘ, ದಕ್ಷಿಣ ಕನ್ನಡ), ಎಂ ದೇವದಾಸ್ (ವಿಭಾಗೀಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ, ಕರ್ನಾಟಕ), ದಿನೇಶ್ ಹೆಗ್ಡೆ ಉಳೆಪಾಡಿ, ನ್ಯಾಯವಾದಿ, ಎಂ ಜಿ ಹೆಗ್ಡೆ (ಸಾಮಾಜಿಕ ಕಾರ್ಯಕರ್ತರು), ಮಂಜುಳಾ ನಾಯಕ್ (ಸಾಮರಸ್ಯ ಮಂಗಳೂರು), ಸುನಿಲ್ ಕುಮಾರ್ ಬಜಾಲ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಐಟಿಯು ದಕ್ಷಿಣ ಕನ್ನಡ), ರಘು ಕೆ ಎಕ್ಕಾರು, (ಸಂಚಾಲಕರು, ದಲಿತ ಸಂಘರ್ಷ ಸಮಿತಿ, ದಕ್ಷಿಣ ಕನ್ನಡ), ವಾಸುದೇವ ಉಚ್ಚಿಲ (ಸಮುದಾಯ, ಮಂಗಳೂರು), ಮುಹಮ್ಮದ್ ಕುಂಜತ್ತಬೈಲ್ (ಮಾಜಿ ಉಪ ಮಹಾಪೌರರು), ಸಂತೋಷ್ ಬಜಾಲ್ (ಜಿಲ್ಲಾ ಕಾರ್ಯದರ್ಶಿ ಡಿವೈಎಫ್ಐ ದಕ್ಷಿಣ ಕನ್ನಡ), ಸೀತಾರಾಮ ಬೇರಿಂಜೆ (ಜಿಲ್ಲಾ ಕಾರ್ಯದರ್ಶಿ, ಎಐಟಿಯುಸಿ ದಕ್ಷಿಣ ಕನ್ನಡ), ಕೃಷ್ಣ ತಣ್ಣೀರುಬಾವಿ (ಸಂಚಾಲಕರು, ದಲಿತ ಹಕ್ಕುಗಳ ಸಮಿತಿ, ದಕ್ಷಿಣ ಕನ್ನಡ) ಪ್ರಕಟಣೆಯಲ್ಲಿ ಮನವಿ‌ ಮಾಡಿದ್ದಾರೆ.

ಇತ್ತೀಚಿನ ಸುದ್ದಿ