ಉಡುಪಿಯಲ್ಲಿ ನಾಲ್ವರ ಹತ್ಯೆ ಪ್ರಕರಣ: ಮೊದಲು ಅಯ್ನಾಝ್ ಮೇಲೆಯೇ ಅಟ್ಯಾಕ್ ಮಾಡಿದ್ದ ಪ್ರವೀಣ್: ಉಡುಪಿ ಎಸ್ ಪಿ ಡಾ.ಅರುಣ್ ಕೆ. ಮಾಹಿತಿ
ಉಡುಪಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಉಡುಪಿಯ ನೇಜಾರಿನ ತೃಪ್ತಿ ಲೇಔಟ್ ನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್ ಪಿ ಡಾ.ಅರುಣ್ ಕೆ. ಅವರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ತಿಳಿಸಿದ್ದಾರೆ.
ನೇಜಾರು ತೃಪ್ತಿ ನಗರದಲ್ಲಿ ನವೆಂಬರ್ 12 ರಂದು ಕೃತ್ಯ ನಡೆದಿತ್ತು. ಹಸೀನಾ, ಆಫ್ನಾನ್, ಅಯ್ನಾಝ್, ಆಸಿಮ್ ಅವರು ಸಾವನ್ನಪ್ಪಿದ್ದರು. ಹತ್ಯೆ ಪ್ರಕರಣದ ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಪ್ರವೀಣ್ ಮತ್ತು ಆಯ್ನಾಸ್ ಗೆ ಕಳೆದ ಎಂಟು ತಿಂಗಳಿಂದ ಪರಿಚಯ ಇತ್ತು. ಇಬ್ಬರಿಗೂ ಮಧ್ಯೆಯಲ್ಲಿ ಗೆಳೆತನ ಇತ್ತು. ಪ್ರವೀಣ್ ಆಯ್ನಾಸ್ ಗೆ ಹಲವಾರು ಸಹಾಯ ಮಾಡಿದ್ದಾರೆ. ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ, ಪಾಸೆಸಿವ್ ನೆಸ್ ನಿಂದ ಕೊಲೆ ಮಾಡಬೇಕೆಂದು ಪ್ರವೀಣ್ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ. ಆರಂಭದಲ್ಲಿ ಅಯ್ನಾಸ್ ಗೆ ಮೊದಲ ಅಟ್ಯಾಕ್ ಮಾಡುತ್ತಾನೆ, ಬಳಿಕ ಹಸೀನಾ, ಅಫ್ನಾನ್, ಆಸಿಂಗೆ ಚಾಕುವಿನಿಂದ ಕೊಲೆ ಮಾಡಿದ್ದಾನೆ. ಬಳಿಕ ಬೇರೆ ಬೇರೆ ವಾಹನದಲ್ಲಿ ದ.ಕ.ಜಿಲ್ಲೆಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿ ತವರು ಮನೆಗೆ ಹೋಗಿದ್ದಾನೆ ಎಂದು ಅವರು ತಿಳಿಸಿದರು.
ನಾವು ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್ ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. 2007 ಪೂನಾ ಪೊಲೀಸ್ ಆಗಿದ್ದ, ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದ್ದಾನೆ. ಅಮಲು ಪದಾರ್ಥ ಸೇವನೆ ಮಾಡಿದ್ದನೋ ಎಂಬ ಬಗ್ಗೆ ಮೆಡಿಕಲ್ ರಿಪೋರ್ಟ್ ಬರಲಿದೆ. ಪ್ರವೀಣ್ ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದಿದ್ದಾನೆ ಎಂದು ಅವರು ಹೇಳಿದರು.
ಕುಡುಚಿಯಲ್ಲಿ ಆರೋಪಿಗೆ ಆಶ್ರಯನೀಡಿದ ವ್ಯಕ್ತಿಯ ವಿಚಾರಣೆ ಮಾಡಿದ್ದೇವೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯುತ್ತೇವೆ. ಕೈಗೆ ಗಾಯವಾಗಿದೆ ಎಂಬ ಬಗ್ಗೆ ಪತ್ನಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ. ಗಂಭೀರ ಪ್ರಕರಣ ಆಗಿರುವ ಕಾರಣ ಎಲ್ಲಾ ಮಾಹಿತಿ ಮಾಧ್ಯಮಕ್ಕೆ ಕೊಡಲು ಸಾಧ್ಯವಿಲ್ಲ. ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ ಎಂದು ಅವರು ತಿಳಿಸಿದರು.
ಉಡುಪಿ ನಗರದಲ್ಲಿ ಹೆಚ್ಚುವರಿ ಸಿಸಿಟಿವಿ ಗಳ ಅಳವಡಿಕೆ ಮಾಡುತ್ತೇವೆ. ಜಿಲ್ಲೆಯ ಎಲ್ಲಾ ಗಡಿಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸ್ತೇವೆ ಎಂದು ಇದೇ ವೇಳೆ ಅವರು ತಿಳಿಸಿದರು.
ಆರೋಪಿ ಪ್ರವೀಣ್ ಹಾಗೂ ಅಯ್ನಾಝ್ ಕುಟುಂಬ, ಫ್ಯಾಮಿಲಿ ತನಿಖೆಗೆ ಬಹಳ ಸಹಕಾರ ಕೊಟ್ಟಿದ್ದಾರೆ. ನೂರ್ ಮೊಹಮ್ಮದ್ ಕುಟುಂಬ ಬಹಳ ನೋವಲ್ಲಿದ್ದಾರೆ. ವಿಶೇಷ ಪಿ.ಪಿ ನೇಮಕಕ್ಕೆ ನಾವು ಸಹಕಾರ ನೀಡುತ್ತವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಗ್ಗೆ ಕುಟುಂಬ ಮನವಿ ನೀಡಿದೆ ಎಂದು ಅವರು ತಿಳಿಸಿದರು.
ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನು ತನಿಖೆ ಮಾಡಿದ್ದೇವೆ. ಹಸೀನಾ ಗೆ ಆರ್ಥಿಕ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿದೆ, ಕುಟುಂಬದಿಂದ ದೂರು ಪಡೆದುಕೊಂಡು ತನಿಖೆ ಮಾಡುತ್ತೇವೆ ಎಂದರು.
ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲಾ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ. ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಇಲಾಖೆಗೆ 1.50 ಲಕ್ಷ ಬಹುಮಾನ ಕೊಡುವ ಬಗ್ಗೆ ಶಿಫಾರಸ್ಸು ಮಾಡಿದ್ದೇನೆ ಎಂದು ಉಡುಪಿ ಎಸ್ ಪಿ ಡಾ. ಅರುಣ್ ಕೆ ಮಾಹಿತಿ ಮಾಹಿತಿ ನೀಡಿದರು.