ಕನ್ನಡಿಗರು-ತಮಿಳರು ಸೇರಿ ಎಳೆದರು ತೇರು…!!
ಚಾಮರಾಜನಗರ: ರಥೋತ್ಸವ ಎಂದರೆ ಸಂಭ್ರಮ, ಸಡಗರವಷ್ಟೇ ಅಲ್ಲ ಭಾವೈಕ್ಯತೆ ಸಾರುವ ಹಬ್ಬವೂ ಹೌದು ಎಂಬುದಕ್ಕೆ ಕರ್ನಾಟಕದ ಗಡಿಯಲ್ಲಿರುವ, ತಮಿಳುನಾಡಿನ ಗೇರುಮಾಳದಲ್ಲಿ ಇಂದು ನಡೆದ ರಥೋತ್ಸವ ಸಾಕ್ಷಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಗಡಿಯಲ್ಲಿರುವ ತಮಿಳುನಾಡಿನ
ಸತ್ಯಮಂಗಲ ತಾಲೂಕಿನ ಗೇರುಮಾಳ ಗ್ರಾಮದಲ್ಲಿರುವ ಜಡೇರುದ್ರಸ್ವಾಮಿ ದೇಗುಲದಲ್ಲಿ ಇಂದು ರಥೋತ್ಸವ ನಡೆದಿದ್ದು ಕನ್ನಡಿಗರು ಮತ್ತು ತಮಿಳುರು ಸೇರಿ ಎಳೆಯುವ ತೇರು ಇದಾಗಿದೆ.
ಈ ರಥೋತ್ಸವದಲ್ಲಿ ತಮಿಳುನಾಡಿನ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಹಾಗೆಯೇ ಈ ಧಾರ್ಮಿಕ ಕಾರ್ಯದಲ್ಲಿ ಕನ್ನಡಿಗರೂ ಪಾಲ್ಗೊಂಡಿದ್ದಾರೆ. ತಮಿಳುನಾಡಿನ ಗಡಿಯಲ್ಲಿರುವ ಚಾಮರಾಜನಗರ ಮಾತ್ರವಲ್ಲದೆ, ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗಳ ಜನರೂ ಗೇರುಮಾಳದ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಮತ್ತೊಂದು ವಿಶೇಷವೇನೆಂದರೆ ಈ ಜಾತ್ರೆಯಲ್ಲಿ ಕನ್ನಡಿಗರು ಮತ್ತು ತಮಿಳಿಗರು ಸಮಾಗಮವಾಗುವುದಲ್ಲದೇ, ಟಿಬೆಟಿಯನ್ನರೂ ಜೊತೆಗೂಡಿದ್ದು ಒಡೆಯರಪಾಳ್ಯ ಟಿಬೆಟಿಯನ್ ನಿರಾಶ್ರಿತ ಕೇಂದ್ರದ ಟಿಬೇಟಿಯನ್ನರು ರಥೋತ್ಸವ ಕಣ್ತುಂಬಿಕೊಂಡಿದ್ದಾರೆ.
ಬೇರೆ ರಾಜ್ಯ, ಅನ್ಯ ಭಾಷಿಕರೆಂಬ ಕಾರಣಕ್ಕೆ ಇಲ್ಲಿನ ಜನರಲ್ಲಿ ಮೂಡುವ ಕಂದಕವನ್ನು ಜಾತ್ರೆ ಹೋಗಲಾಡಿಸಿ, ಅದರಲ್ಲೂ ತಮಿಳುನಾಡಿನಲ್ಲಿ ನಡೆಯುವ ಜಾತ್ರೆಯಲ್ಲಿ ಕನ್ನಡಿಗರು ಸಂತೋಷದಿಂದ ಭಾಗವಹಿಸುವುದು ಸ್ನೇಹ ಸೌದಾರ್ಹತೆಗೆ ಉದಾರಣೆ ಎನ್ನಬಹುದು.