ಕೋಳಿಗೆ ಹೆದರಿ 7 ದಿನಗಳಿಂದ ಶಾಲೆಗೆ ಹೋಗದ ಮಕ್ಕಳು!!
ಚಾಮರಾಜನಗರ: ಕೋಳಿ ಮಾಡಿದ ಎಡವಟ್ಟು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ 1 ವಾರದಿಂದ ಶಾಲೆಗೆ ಮಕ್ಕಳು ತೆರಳದಿರುವ ಘಟನೆ ಹನೂರು ತಾಲೂಕಿನ ಪೆದ್ದನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕಳೆದ ಗುರುವಾರ ಶಾಲೆಯಲ್ಲಿ ಒಂದನೇ ತರಗತಿ ಬಾಲಕಿಗೆ ಕೋಳಿ ಕಚ್ಚಿ ಗಾಯಗೊಳಿಸಿದ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸೂಕ್ತ ರಕ್ಷಣೆ ಕೊಡವ ತನಕ ಮಕ್ಕಳು ಶಾಲೆಗೆ ಕಳುಹಿಸಲ್ಲ ಎಂದು ಪಟ್ಟು ಹಿಡಿದಿರುವುದರಿಂದ 1 ವಾರದಿಂದ ಮಕ್ಕಳು ಶಾಲೆಗೆ ಬಂದಿಲ್ಲ.
ಬಿಇಒ, ತಾಲೂಕು ಇಒ ಬಂದರೂ ಕೂಡ ಪಾಲಕರು ಪಟ್ಟು ಸಡಿಲಿಸಿಲ್ಲ, ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಿರುವುದರಿಂದ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಾಲಕರು ತಿಳಿಸಿದ್ದು ಅದರಂತೆ ಮಕ್ಕಳು ಶಾಲೆಯತ್ತ ಮುಖ ಮಾಡಿ 1 ವಾರವಾಗಿದೆ.
ಶಾಲೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ವಿನಾಕಾರಣ ಹಸು ಕರುಗಳನ್ನು ಕಟ್ಟು ತ್ತಿದ್ದು ಜೊತೆಗೆ ಕೋಳಿಗಳನ್ನು ಮೇಯಲು ಬಿಡುತ್ತಿರುವ ಪರಿಣಾಮ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ, ಶಾಲಾ ಸುತ್ತಲೂ ಕಾಂಪೌಂಡ್ ಕಟ್ಟಬೇಕು, ಶಾಲಾ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ಶಾಲವರಣ ಪ್ರವೇಶಕ್ಕೆ ನಿರ್ಬಂಧ ಹೇರಬೇಕೆಂದು ಪಾಲಕರ ಒತ್ತಾಯವಾಗಿದೆ.
ಕೋಳಿ ಕುಕ್ಕಿದ ಘಟನೆಯಿಂದ ಬರೋಬ್ಬರಿ 1 ವಾರ ಶಾಲೆಯಿಂದ ಮಕ್ಕಳು ಹೊರಗುಳಿಯುವಂತಾಗಿದೆ.