ಪೂಜೆ ಮಾಡಲು ಕುಲ ಗೋತ್ರ ಕೇಳಿದ ಪುರೋಹಿತನಿಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಕಾರವಾರ: ಮೌಢ್ಯತೆ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದ ಸತೀಶ್ ಜಾರಕಿಹೊಳಿ ಈಗಾಗಲೇ ಮೌಢ್ಯತೆ ವಿರುದ್ಧದ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ. ಇದೀಗ ಮೌಢ್ಯತೆ ವಿರುದ್ಧ ಅವರು ಮತ್ತೊಮ್ಮೆ ಧ್ವನಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗಾರ ಗ್ರಾಮದಲ್ಲಿ ಕಾಲು ಸಂಕ ನಿರ್ಮಾಣ ಕಾಮಗಾರಿ ಆರಂಭಕ್ಕೆ ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪೂಜೆ ಮಾಡುತ್ತಿದ್ದ ಪುರೋಹಿತ ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿಯಲ್ಲಿ ಪೂಜೆಗಾಗಿ ಕುಲ, ಗೋತ್ರ ಕೇಳಿದ್ದಾರೆ. ಸತೀಶ್ ಜಾರಕಿಹೊಳಿಯವರು ನೀಡಿದ ಉತ್ತರಕ್ಕೆ ಕೆಲಕಾಲ ಪುರೋಹಿತರು ಶಾಕ್ ಆಗಿದ್ದಾರೆ.
ನನ್ನ ಕುಲ ಮಾನವ ಕುಲ, ಮಾನವ ನಕ್ಷತ್ರ ಎಂದು ಸಚಿವರು ಪುರೋಹಿತರಿಗೆ ಹೇಳಿದ್ದಾರೆ. ಕೊನೆಗೆ ಪುರೋಹಿತರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮಾನವ ಕುಲ, ಮಾನವ ನಕ್ಷತ್ರದ ಹೆಸರಿನಲ್ಲಿ ಪೂಜೆ ಮಾಡಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಪೂಜೆ ಅಗತ್ಯವೇ?
ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಪೂಜೆಗಳು ಅಗತ್ಯವೇ? ಎನ್ನುವ ಪ್ರಶ್ನೆಗಳು ಈ ಹಿಂದಿನಿಂದಲೂ ಪ್ರಜ್ಞಾವಂತರು ಪ್ರಶ್ನಿಸುತ್ತಲೇ ಇರುತ್ತಾರೆ. ಪುರೋಹಿತಶಾಹಿ ಮನಸ್ಥಿತಿಯ ಅಧಿಕಾರಿಗಳು ಇಂತಹದ್ದೊಂದು ಸಂಪ್ರದಾಯವನ್ನು ಈ ಹಿಂದಿನಿಂದಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಸರ್ಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎನ್ನುವ ಒತ್ತಾಯಗಳು ಹಿಂದಿನಿಂದಲೂ ಕೇಳಿ ಬರುತ್ತಿದೆ.