ಅಂಬೇಡ್ಕರ್ ಹೇಳಿದ ಮಾತುಗಳು - Mahanayaka

ಅಂಬೇಡ್ಕರ್ ಹೇಳಿದ ಮಾತುಗಳು

ambedkar
11/02/2024

ನಿಮ್ಮ ಬಟ್ಟೆ ತೇಪೆಯಿಂದ ಕೂಡಿದ್ದರೇನಾಯಿತು? ಸ್ವಚ್ಛವಾಗಿರಿ. ನಿಮ್ಮನ್ನು   ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ. ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ. ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದು ಅವರಲ್ಲಿ ಆತ್ಮವಿಶ್ವಾಸ ತುಂಬಿ. ಮಹಾನ್ ವ್ಯಕ್ತಿಗಳಾಗಲು ಹುಟ್ಟಿದ್ದಾರೆಂದು ಅವರನ್ನು ನಂಬಿಸಿ. ವಿದ್ಯಾಭ್ಯಾಸ ತುಂಬಾ ಮುಖ್ಯ. ವಿದ್ಯೆ ಕಲಿತ ಮಹಿಳೆ ಮುಂದುವರೆಯುತ್ತಾಳೆ. ಅವಳಂತೆ ಅವಳ ಮಕ್ಕಳೂ ತಯಾರಾಗುತ್ತಾರೆ.  ಆದರೆ ಕುಡಿದು ಮನೆಗೆ ಬರುವ ನಿಮ್ಮ ಗಂಡ ಮಗನನ್ನು ಮಾತ್ರ ಖಂಡಿತಾ ಸಾಕಬೇಡಿ.

ಮದುವೆಗೆ ಅವಸರಪಡಬೇಡಿ ಮದುವೆ ಒಂದು ಬಂಧನ. ಮದುವೆಯ ನಂತರದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಶಕ್ತಿಶಾಲಿಯಲ್ಲದಿದ್ದರೆ ಮದುವೆಯಾಗಬೇಡಿ. ಮದುವೆಯಾದ ಹೆಣ್ಣು ಗಂಡನ ಪಕ್ಕ ಸರಿಸಮಾನಳಾಗಿ ನಿಲ್ಲಬೇಕು, ದಾಸಿಯಂತಲ್ಲ.

ಮದುವೆಯಾದವರು ನೆನಪಿಡಿ ತುಂಬ ಮಕ್ಕಳನ್ನು ಹೆರುವುದು ಅಪರಾಧ ಏಕೆಂದರೆ, ನಮ್ಮ ಪಾಲಕರು ನೀಡಿದ್ದಕ್ಕಿಂತ ಹೆಚ್ಚಿನದನ್ನು ನಾವು ನಮ್ಮ ಮಕ್ಕಳಿಗೆ ನೀಡಲು ಶಕ್ತರಾಗಿರಬೇಕು. ನಾವು ಭಾರತೀಯರು ಮಕ್ಕಳ ಹುಟ್ಟಿದ ಮೇಲೆ ಅವರಿಗೆ ಬಟ್ಟೆ ಹೊಲಿಯುತೇವೆ. ವಿದೇಶದಲ್ಲಿ ಹಾಗಲ್ಲ. ಮಗು ಬರುವ ಮೊದಲೇ ಎಲ್ಲ ತಯಾರಿ ಮಾಡಿಕೊಂಡಿರುತ್ತಾರೆ.


Provided by

ನನ್ನ ಸ್ವಂತ ಅನುಭವವನ್ನೇ ಹೇಳಬೇಕೆಂದರೆ ವಿದೇಶದಿಂದ ಓದು ಮುಗಿಸಿ ವಾಪಸಾದ ಮೇಲೂ ಜಾತಿಯ ಕಾರಣದಿಂದ ಲಾಯರ್ ವೃತ್ತಿ ಕಷ್ಟವಾಯಿತು. ಬರಿಯ ನುಚ್ಚಿನ ಅನ್ನ ಉಂಡು ಬದುಕುತ್ತಿದ್ದೆವು. ನಾನೂ ದುರ್ಬಲನಾದೆ. ನನ್ನ ಮಗುವೊಂದು ಕಾಯಿಲೆ ಬಂದು ತೀರಿಕೊಂಡಿತು. ಅದರ  ಅಂತ್ಯ ಸಂಸ್ಕಾರ ಮಾಡಲು ಹಣಕ್ಕೆ ಬಹಳ ತೊಂದರೆಯಾಯಿತು. ನಂತರ ಹೆಂಡತಿ ರಮಾ ತೀವ್ರ ಅಸ್ವಸ್ಥಗೊಂಡಳು. ವೈದ್ಯರು ಇನ್ನೊಂದು ಮಗುವಾದರೆ ಅವಳ ಜೀವಕ್ಕೆ ಅಪಾಯ ಎಂದರು. ನಾವು ಬ್ರಹ್ಮಚರ್ಯ ಪಾಲಿಸತೊಡಗಿದೆವು. ನನ್ನ ಬಳಿ ಸಾಧ್ಯವಾದ ಪ್ರಯತ್ನವನ್ನೆಲ್ಲ ಮಾಡಿದೆ. ಆದರೆ ನಮ್ಮೆಲ್ಲ ಪ್ರಯತ್ನ ಚಿಕಿತ್ಸೆ ಫಲಿಸದೇ ಅವಳು ನನ್ನ ಬಿಟ್ಟೇ ಹೋದಳು.

ಕೃತಿ: ಭೀಮಯಾನ ಅಂಬೇಡ್ಕರ್ ಅವರ ಚಿಂತನೆಗಳು.

ಕನ್ನಡಕ್ಕೆ ಅನುವಾದಿಸಿದವರು ಡಾ.ಎಚ್.ಎಸ್.ಅನುಪಮಾ ಮತ್ತು ಬಸೂ.

ajith madar

ಸಂಗ್ರಹ: ಅಜೀತ ಮಾದರ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ.

ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ: http://zeh19v.ttu.cc

 

ಇತ್ತೀಚಿನ ಸುದ್ದಿ