ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ: ಅಲ್ಲಲ್ಲಿ ಕಲ್ಲು ತೂರಾಟ; ಪೊಲೀಸ್ ಬಂದೋಬಸ್ತ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾವಿರಾರು ರೈತರು ಇಂದು ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಗಡಿಯಲ್ಲಿ ಸೇರುತ್ತಿದ್ದಂತೆಯೇ ಪೊಲೀಸರು ಅವರತ್ತ ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾನಿರತರನ್ನು ಚದುರಿಸುವ ಯತ್ನ ಮಾಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ರೈತರ ದೆಹಲಿ ಚಲೋ ಯಾತ್ರೆಯನ್ನು ತಡೆಯಲು ದೆಹಲಿಯಲ್ಲಿ ಈಗಾಗಲೇ ಪೊಲೀಸರು ವ್ಯಾಪಕ ವ್ಯವಸ್ಥೆಯನ್ನು ಮಾಡಿದ್ದಾರೆ. ಇನ್ನು
ಹಲವೆಡೆ ಕಾಂಕ್ರೀಟ್ ಗೋಡೆಗಳು ಮತ್ತು ತಂತಿಗಳನ್ನು ಆಳವಡಿಸಲಾಗಿದ್ದು ಈ ಮೂಲಕ ರೈತರು ದಿಲ್ಲಿ ಪ್ರವೇಶಿಸುವುದನ್ನು ತಡೆಯುವ ಯತ್ನ ಮಾಡಲಾಗಿದೆ.
ಸ್ಥಳದ ತುಂಬಾ ದಟ್ಟ ಹೊಗೆ ಆವೃತವಾಗಿದ್ದು ಕಲ್ಲು ತೂರಾಟವೂ ನಡೆದಿದೆ ಎಂದು ವರದಿಯಾಗಿದೆ. ಒಂದೆಡೆ ಭದ್ರತಾ ಪಡೆಗಳು ರೈತರನ್ನು ತಡೆಯಲು ಇರಿಸಿದ್ದ ಕಾಂಕ್ರೀಟ್ ಸ್ಲ್ಯಾಬ್ಗಳನ್ನೂ ರೈತರು ತೆರವುಗೊಳಿಸಲು ಸಫಲರಾದರು.
ಸೋಮವಾರ ರಾತ್ರಿ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಪ್ರಮುಖರೊಂದಿಗೆ ರೈತರ ಬೇಡಿಕೆಗಳ ಕುರಿತ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸುಮಾರು 200 ರೈತ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದವು.
ದಿಲ್ಲಿಯ ಗಡಿ ಭಾಗಗಳಲ್ಲಿ ಬದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಕಬ್ಬಿಣದ ಬೇಲಿಗಳು, ಮೊಳೆಗಳು ಮತ್ತು ಕಾಂಕ್ರೀಟ್ ಗೋಡೆಗಳಿಂದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಸನ್ನದ್ಧರಾಗಿದ್ಧಾರೆ. ರಾಜಧಾನಿಯ ಹಲವೆಡೆ ಸಂಚಾರ ನಿರ್ಬಂಧಗಳಿಂದ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ರೈತರ ಪ್ರತಿಭಟನೆಯ ಕುರಿತು ಮಾತನಾಡಿದ ಕೃಷಿ ಸಚಿವ ಅರ್ಜುನ್ ಮುಂಡಾ, “ವಾತಾವರಣವನ್ನು ಕಲುಷಿತಗೊಳಿಸಲು ಹಲವು ಜನರು ಯತ್ನಿಸುತ್ತಿದ್ದಾರೆಂಬ ಮಾಹಿತಿ ಸರ್ಕಾರಕ್ಕಿದೆ. ಇಂತಹ ಶಕ್ತಿಗಳ ಬಗ್ಗೆ ಜಾಗರೂಕರಾಗಿರುವಂತೆ ರೈತರನ್ನು ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ.