ಕಾವೇರಿದ ರೈತರ ದೆಹಲಿ ಚಲೋ ಪ್ರತಿಭಟನೆ: ಅನ್ನದಾತರ ಮೇಲೆ ಅಶ್ರವಾಯು, ಜಲಫಿರಂಗಿ ಪ್ರಯೋಗ
ರೈತರ ದೆಹಲಿ ಚಲೋ ಪ್ರತಿಭಟನೆಯನ್ನು ತಡೆಯಲು ಹರ್ಯಾಣ ಪೊಲೀಸರು ರೈತರ ಮೇಲೆ ಅಶ್ರವಾಯು, ಜಲಫಿರಂಗಿ ಪ್ರಯೋಗ ಮಾಡಿದ್ದು, ಪೊಲೀಸರ ಈ ವರ್ತನೆ ಖಂಡಿಸಿ ದೇಶಾದ್ಯಾಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಪ್ರತಿಭಟನೆಯಲ್ಲಿ ಕಲ್ಲು ಹೊಡೆಯುತ್ತಿರುವವರು ರೈತರಲ್ಲ. ಅನುಮತಿ ಪಡೆಯದೆ ಬರುವವರನ್ನು ತಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ದೇಶಾದ್ಯಾಂತ ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್, ರೈತರ ಮೇಲೆ ನಡೆಸಿರುವ ಪೈಶಾಚಿಕ ದೌರ್ಜನ್ಯವನ್ನು ಖಂಡಿಸಲು ದೇಶದಾದ್ಯಂತ ಪ್ರತಿಭಟಿಸಿ ಗ್ರಾಮೀಣ ಮಟ್ಟದಲ್ಲಿ ರಸ್ತೆ ಬಂದ್ ಮಾಡಲು ತಿರ್ಮಾನಿಸಿದೆ ಎಂದರು. ಎಲ್ಲಾ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ರಾಜ್ಯಾದ್ಯಂತ ಫೆ.೧೬ ರಂದು ಬೆಳಿಗ್ಗೆ ೧೧ ರಿಂದ ೧ ಗಂಟೆವರೆಗೂ ರಸ್ತೆ ಬಂದ್ ಚಳುವಳಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿಲ್ಲ. ಈಗಾಗಲೇ ಕೃಷಿ ಸಚಿವ ಮುಂಡಾ ರೈತರ ಸಂಘಟನೆ ಜೊತೆ ಮಾತನಾಡಿದ್ದಾರೆ. ರೈತರು ಹೊಸ ಬೇಡಿಕೆ ಇಟ್ಟಿದ್ದು, ನಮ್ಮ ಸರ್ಕಾರ ಸಹಾನಭೂತಿಯಿಂದ ಆ ಬಗ್ಗೆ ಪರಿಶೀಲಿಸುತ್ತಿದೆ ಎಂದರು. ಪ್ರತಿಭಟನೆಯಲ್ಲಿ ಕಲ್ಲು ಹೊಡೆಯುತ್ತಿರುವವರು ರೈತರಲ್ಲ. ಅನುಮತಿ ಪಡೆಯದೆ ಬರುವವರನ್ನು ತಡೆಯಲಾಗುತ್ತಿದೆ.
ರೈತರು ತಮ್ಮ ಬೇಡಿಕೆಗಳ ಬಗ್ಗೆ ಚರ್ಚೆಗೆ ಬರಬೇಕು. ಅವರೊಂದಿಗೆ ನಾವು ಸಹಾನುಭೂತಿಯಿಂದ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.