ರೈತರ ಪ್ರತಿಭಟನೆಯ ಕಿಚ್ಚು: ಹರ್ಯಾಣದ 7 ಜಿಲ್ಲೆಗಳಲ್ಲಿ ಇಂಟರ್ ನೆಟ್ ಬ್ಯಾನ್
ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹರ್ಯಾಣ ಸರಕಾರವು ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂಟರ್ ನೆಟ್ ಮತ್ತು ಸಗಟು ಸಂದೇಶ ರವಾನೆಯ ಮೇಲೆ ನಿಷೇಧವನ್ನು ಫೆಬ್ರವರಿ 15ರವರೆಗೆ ವಿಸ್ತರಿಸಿದೆ. ಇದೇ ವೇಳೆ ಪಂಜಾಬ್ ಮತ್ತು ಚಂಡೀಗಡ ಉಚ್ಚ ನ್ಯಾಯಾಲಯವು ರೈತರು ದಿಲ್ಲಿಯನ್ನು ತಲುಪುವುದನ್ನು ತಡೆಯಲು ಇಂಟರ್ ನೆಟ್ ಸ್ಥಗಿತ ಮತ್ತು ಇತರ ನಿಷೇಧ ಕ್ರಮಗಳ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ರೈತರ ದಿಲ್ಲಿ ಚಲೋ ಆಂದೋಲನದ ಸ್ಥಿತಿಗತಿಯನ್ನು ತಿಳಿಸುತ್ತಿದ್ದ ಹಲವಾರು ಎಕ್ಸ್ ಖಾತೆಗಳನ್ನು ಅಪಾರದರ್ಶಕ ಕ್ರಮವೊಂದರಲ್ಲಿ ತಡೆಹಿಡಿಯಲಾಗಿದೆ. ರೈತರು ಸಂಚಾರದ ಮತ್ತು ಸಭೆ ಸೇರುವ ಹಕ್ಕನ್ನು ಹೊಂದಿದ್ದಾರೆ ಎಂದು ಬೆಟ್ಟು ಮಾಡಿರುವ ಉಚ್ಚ ನ್ಯಾಯಾಲಯವು, ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಲು ಅವರಿಗೇಕೆ ಅವಕಾಶ ನೀಡಬಾರದು ಎಂದು ಪ್ರಶ್ನಿಸಿದೆ.
ಪಂಚಕುಲಾದ ವಕೀಲ ಉದಯ ಪ್ರತಾಪ ಸಿಂಗ್ ದಿಲ್ಲಿಯ ಗಡಿಗಳನ್ನು ಮುಚ್ಚಿರುವುದನ್ನು ಪ್ರಶ್ನಿಸಿ ಈ ಪಿಐಎಲ್ನ್ನು ಸಲ್ಲಿಸಿದ್ದಾರೆ. ಪೋಲಿಸರು ರೈತರು ದಿಲ್ಲಿ ತಲುಪುವುದನ್ನು ತಡೆಯಲು ರಸ್ತೆಗಳಲ್ಲಿ ಸಿಮೆಂಟ್ ಬ್ಯಾರಿಕೇಡ್ಗಳು,ಮುಳ್ಳುತಂತಿಗಳು ಇತ್ಯಾದಿಗಳನ್ನು ಅಳವಡಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದೆ.
ನ್ಯಾಯಾಲಯವು ದಿಲ್ಲಿ ಸರಕಾರವನ್ನು ಅರ್ಜಿಯಲ್ಲಿ ಕಕ್ಷಿಯನ್ನಾಗಿ ಸೇರಿಸಿದ್ದು, ಹರ್ಯಾಣ, ಪಂಜಾಬ್ ಸರಕಾರಗಳು ಮತ್ತು ಚಂಡಿಗಡ ಆಡಳಿತದಿಂದ ಉತ್ತರವನ್ನು ಕೇಳಿದೆ. ದಿಲ್ಲಿ ಚಲೋ ಆಂದೋಲನದ ನೇತೃತ್ವವನ್ನು ವಹಿಸಿರುವ ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ ಮೋರ್ಚಾಗಳನ್ನೂ ಕಕ್ಷಿಗಳನ್ನಾಗಿ ಮಾಡಲಾಗಿದೆ.