ಈಜಲು ತೆರಳಿದ್ದ ಒಂದೇ ಶಾಲೆಯ ನಾಲ್ವರು ಬಾಲಕರು ನದಿಯಲ್ಲಿ ಮುಳುಗಿ ದಾರುಣ ಸಾವು!
ಸುರತ್ಕಲ್: ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಕೊಪ್ಪಳ ಅಣೆಕಟ್ಟ ರೈಲ್ವೇ ಸೇತುವೆಯಲ್ಲಿ ನಡೆದಿದೆ.
ಯಶ್ವಿತ್(15), ರಾಘವೇಂದ್ರ(15) ನಿರೂಪ್(15), ಅನ್ವಿತ್(15) ಮೃತಪಟ್ಟ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರೆಲ್ಲರೂ ಸುರತ್ಕಲ್ ನ ಖಾಸಗಿ ಶಾಲೆಯೊಂದರಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಓದುತ್ತಿದ್ದರು.
ಇಂಗ್ಲಿಷ್ ಪೂರ್ವ ಸಿದ್ಧತಾ ಪರೀಕ್ಷೆಗೆ ತೆರಳಿದ್ದ ವಿದ್ಯಾರ್ಥಿಗಳು ಹಳೆಯಂಗಡಿಗೆ ಬಂದು, ಅಲ್ಲಿಂದ ಕೊಪ್ಪಳ ಅಣೆಕಟ್ಟು ರೈಲ್ವೇ ಸೇತುವೆ ಕೆಳಗೆ ಹೋಗಿದ್ದರು. ನಾಲ್ವರು ವಿದ್ಯಾರ್ಥಿಗಳು ತಮ್ಮ ಶಾಲಾ ಬ್ಯಾಗ್ ಗಳನ್ನು ದಡದಲ್ಲಿಟ್ಟು ನದಿಗೆ ಇಳಿದಿದ್ದು, ನೀರಲ್ಲಿ ಮುಳುಗಿದ್ದಾರೆ. ಈ ವೇಳೆ ಜೊತೆಗಿದ್ದ ಮೂವರು ಸ್ಥಳದಿಂದ ತಮ್ಮ ಮನೆಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.
ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದು, ಶಾಲೆ, ಬಸ್ ನಿಲ್ದಾಣ ಬಳಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ ವೇಳೆ ವಿದ್ಯಾರ್ಥಿಗಳು ಬಸ್ ಹತ್ತಿ ಹಳೆಯಂಗಡಿಯಲ್ಲಿ ಇಳಿದಿರೋದು ಬೆಳಕಿಗೆ ಬಂದಿದೆ.
ಓರ್ವ ವಿದ್ಯಾರ್ಥಿಯ ಬಳಿಯಿದ್ದ ಮೊಬೈಲ್ ಲೊಕೇಶನ್ ಬಳಸಿ ಸ್ಥಳಕ್ಕೆ ತೆರಳಿದ ವೇಳೆ ನಾಲ್ವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟಿರೋದು ಬೆಳಕಿಗೆ ಬಂದಿದೆ.