ಆಶೀರ್ವಾದ ನೀಡಲು ಆಗಮಿಸಿದ್ದ ಪಾದ್ರಿಯಿಂದ ವೃದ್ಧ ದಂಪತಿಯ ಮೇಲೆ ಅಮಾನವೀಯ ಹಲ್ಲೆ!
ವಿಟ್ಲ: ಸಾರ್ವಜನಿಕರಿಗೆ ಮಾದರಿಯಾಗಬೇಕಿದ್ದ ಪಾದ್ರಿಯೊಬ್ಬರು ಬಡ ವೃದ್ಧ ದಂಪತಿಗೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ.
ಮನೇಲ ಪರಿಯಲ್ತಡ್ಕ ಕ್ರೈಸ್ಟ್ ಕಿಂಗ್ ಪ್ಯಾರಿಷ್ ನ ಪಾದ್ರಿ ನೆಲ್ಸನ್ ಒಲಿವೆರಾ ಹಲ್ಲೆ ನಡೆಸಿದ ಪಾದ್ರಿ ಎನ್ನಲಾಗಿದೆ. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೆ.29ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಪಾದ್ರಿ ಆಶೀರ್ವಾದಕ್ಕೆ ತೆರಳದ ವೇಳೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಇವರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ತಾಳ್ಮೆ ಕಳೆದುಕೊಂಡ ಪಾದ್ರಿ ವೃದ್ಧ ದಂಪತಿಗೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ವೃದ್ಧನ ಕಾಲರ್ ಹಿಡಿದು ಎಳೆದೊಯ್ದ ಫಾದರ್ ತೀವ್ರ ಹಲ್ಲೆ ನಡೆಸಿದ್ದು, ಪತಿಯನ್ನು ರಕ್ಷಿಸಲು ಬಂದ ವೃದ್ಧೆಗೆ ಫಾದರ್ ಒದೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ದಂಪತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.