ಸೈಡ್ ಕೊಡುವ ವೇಳೆ ಹಳ್ಳಕ್ಕೆ ಮಗುಚಿ ಬಿದ್ದ ಕಾರು: ಇಬ್ಬರಿಗೆ ಗಾಯ
ಮೂಡಿಗೆರೆ: ಕಿರಿದಾದ ಸೇತುವೆಯಲ್ಲಿ ಎದುರಿನಿಂದ ಬಂದ ವಾಹನಕ್ಕೆ ರಸ್ತೆಬಿಟ್ಟುಕೊಡಲು ಸಾಧ್ಯವಾಗದೇ ಕಾರೊಂದು ಹಳ್ಳಕ್ಕೆ ಮಗುಚಿ ಬಿದ್ದ ಘಟನೆ ಮೂಡಿಗೆರೆ–ಗೆಂಡೇಹಳ್ಳಿ ರಸ್ತೆಯ ಕನ್ನಾಪುರ ಸಮೀಪದ ಬೊಮ್ಮೇನಹಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ.
ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಸೈಡ್ ಕೊಡಲು ಸಾಧ್ಯವಾಗದೇ ಇನ್ನೋವಾ ಕಾರೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ವೇಗವಾಗಿ ಬರುತ್ತಿದ್ದ ಕಾರಿಗೆ ಏಕಾಏಕಿ ಟಿಪ್ಪರ್ ಲಾರಿ ಎದುರಾಗಿದ್ದು, ಅಪಘಾತವನ್ನು ತಪ್ಪಿಸಲು ಕಾರಿನ ಚಾಲಕ ಬ್ರೇಕ್ ಒತ್ತಿದ್ದು, ಕಾರು ನಿಯಂತ್ರಣ ತಪ್ಪಿ ಕಳೆದ ಉರುಳಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಪೆಟ್ಟಾಗಿದ್ದು, ಕಾರು ಜಖಂಗೊಂಡಿದೆ. ಬೇಸಿಗೆ ಆಗಿರುವುದರಿಂದ ಹೊಳೆಯಲ್ಲಿ ಹೆಚ್ಚಿನ ನೀರು ಇಲ್ಲದಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ತಕ್ಷಣ ಸ್ಥಳೀಯರು ನೆರವಿಗೆ ಬಂದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಕಾರು ಮಂಗಳೂರು ಮೂಲದ್ದು ಎಂದು ತಿಳಿದುಬಂದಿದ್ದು, ಹಾಸನದಿಂದ ಬೇಲೂರು ಗೆಂಡೇಹಳ್ಳಿ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುತ್ತಿದ್ದು ಎನ್ನಲಾಗಿದೆ.
ಬೊಮ್ಮೇನಹಳ್ಳಿ ಸಮೀಪ ಹರಿಯುತ್ತಿರುವ ಹಳ್ಳಕ್ಕೆ ನಿರ್ಮಾಣ ಮಾಡಿರುವ ಸೇತುವೆ ಬಹಳ ಕಿರಿದಾಗಿದ್ದು, ಅಲ್ಲಿ ವಾಹನಗಳು ಏಕಾಏಕಿ ಎದುರಾದಾಗ ಪರಸ್ಪರ ರಸ್ತೆ ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ. ಸೇತುವೆ ತುಂಬಾ ಕಿರಿದಾಗಿದ್ದು, ಶಿಥಿಲವಾಗಿದೆ. ಸೇತುವೆಗೆ ಯಾವುದೇ ತಡೆಗೋಡೆಯನ್ನು ನಿರ್ಮಾಣ ಮಾಡಿಲ್ಲ. ಏಕಕಾಲದಲ್ಲಿ ಎರಡು ವಾಹನಗಳು ಎದುರಾದಾಗ ತುಂಬಾ ಅಪಘಾತಗಳು ಸಂಭವಿಸಿವೆ.
ಇತ್ತೀಚೆಗೆ ಈ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಈ ಸೇತುವೆ ಈಗಿನ ವಾಹನ ದಟ್ಟಣೆಗೆ ಸೂಕ್ತವಾಗಿಲ್ಲ. ಮಳೆಗಾಲದಲ್ಲಿ ಹೊಳೆಯ ನೀರು ಸೇತುವೆಯ ಮೇಲೆಯೇ ಉಕ್ಕಿ ಹರಿಯುತ್ತದೆ. ಜೊತೆಗೆ ಈ ಸೇತುವೆ ತಿರುವಿನಲ್ಲಿ ಇರುವುದರಿಂದ ಎದುರಿನಿಂದ ಬರುವ ವಾಹನಗಳ ಸೂಚನೆಯೂ ತಿಳಿಯುವುದಿಲ್ಲ.
ಹಾಗಾಗಿ ಈ ಸೇತುವೆಯನ್ನು ಅಗಲೀಕರಣಗೊಳಿಸಿ ತಡೆಗೋಡೆ ಸಹಿತ ಉತ್ತಮ ಸೇತುವೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಲೇ ಬುರತ್ತಿದ್ದಾರೆ. ಆದರೆ ಇದರ ಬಗ್ಗೆ ಜನಪ್ರಿತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿಲ್ಲ. ಈ ಸೇತುವೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಸ್ಥಳೀಯ ಮೂಡಿಗೆರೆ ಶಾಸಕರು ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth