ಕೆಡಿಪಿ ಸಭೆಯಲ್ಲಿ ಕ್ರೈಸ್ತ ಸಮುದಾಯದ ಬಗ್ಗೆ ನಾಲಿಗೆ ಹರಿಯ ಬಿಟ್ಟ ಸಂಸದ ಪ್ರತಾಪ್ ಸಿಂಹ | ಅಧಿಕಾರಿಗಳ ಸಭೆಯಲ್ಲಿ ಕುಡುಕರ ಭಾಷೆ ಬಳಕೆ
ಬೆಂಗಳೂರು: ಸದಾ ಧರ್ಮ ದ್ವೇಷಿ ಹೇಳಿಕೆ ಕೊಡುತ್ತಾ, ವಿವಾದಕ್ಕೀಡಾಗುತ್ತಿರುವ ಸಂಸದ ಪ್ರತಾಪ್ ಸಿಂಹ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದು, ಕ್ರೈಸ್ತ ಸಮುದಾಯದ ಬಗ್ಗೆ ಅವಹೇಳನಾಕಾರಿ ಪದಗಳನ್ನು ಅಧಿಕಾರಿಗಳ ಸಭೆಯಲ್ಲಿ ಮಾತನಾಡುವ ಮೂಲಕ ತಮ್ಮ ಘನತೆಯನ್ನು ಮರೆತಿದ್ದಾರೆ.
ಫೆ.24ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ಕ್ರೈಸ್ತರ ವಿರುದ್ಧ ಮಾತನಾಡಿದ ಪ್ರತಾಪ್, ಮೊದಲು ಕುತ್ತಿಗೆಗೆ ಶಿಲುಬೆ ಹಾಕಿಕೊಂಡು ಓಡಾಡುವವರನ್ನು ಗುರುತಿಸಿ ಅವರಿಗೆ ಸೌಲಭ್ಯ ವಿತರಣೆ ಮಾಡುತ್ತಿದ್ದರೆ, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
ಸಂಸದನಾಗಿರುವ ಪ್ರತಾಪ್ ಸಿಂಹ ಒಬ್ಬ ಕುಡುಕ ಬಳಸುವಂತಗ ಪದಗಳನ್ನು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿರುವುದರ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಕರ್ನಾಟಕ ಕ್ರಿಶ್ಚಿಯನ್ ಪೊಲಿಟಿಕಲ್ ಲೀಡರ್ಸ್ ಫೋರಂ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ಇಂತಹ ಹೇಳಿಕೆಯನ್ನು ನೀಡಿದ ಪ್ರತಾಪ್ ಸಿಂಹ ಕೂಡಲೇ ಕ್ರೈಸ್ತರ ಕ್ಷಮೆ ಕೇಳಬೇಕು. ಇಲ್ಲವಾದರೆ, ಅವರ ಪ್ರತಿ ಕಾರ್ಯಕ್ರಮಗಳಿಗೂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಕ್ರಿಶ್ಚಿಯನ್ ಪೊಲಿಟಿಕಲ್ ಲೀಡರ್ಸ್ ಫೋರಂ ಎಚ್ಚರಿಕೆ ನೀಡಿದೆ.
ಫೋರಂನ ಕಾರ್ಯಕರ್ತರು ನಗರ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆ ಬಳಿ ಸೋಮವಾರ ಶಿಲುಬೆ ಹಿಡಿದು ಧರಣಿ ಸತ್ಯಾಗ್ರಹ ನಡೆಸಿದ್ದು, ಪ್ರತಾಪ್ ಸಿಂಹನ ವಿರುದ್ಧ ಘೋಷಣೆ ಕೂಗಿದರು. ನಾವು ನೀಡುವ ತೆರಿಗೆ ಹಣದಿಂದ ನಮ್ಮ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಸಿಗುತ್ತದೆಯೇ ಹೊರತು ಪ್ರತಾಪ್ ಸಿಂಹನ ಕೈಯಿಂದ ಒಂದು ರೂಪಾಯಿ ಯಾರೂ ಕೇಳಿಲ್ಲ, ಪ್ರತಾಪ್ ಸಿಂಹಗೆ ನಾವು ಸರ್ಕಾರಕ್ಕೆ ನೀಡುವ ತೆರಿಗೆ ಹಣದಿಂದ ವೇತನ ಸಿಗುತ್ತದೆಯೇ ಹೊರತು ಅವರಿಂದ ನಾವು ಏನನ್ನು ಪಡೆದುಕೊಂಡಿಲ್ಲ ಎಂದು ಮುಖಂಡರು ತಿರುಗೇಟು ನೀಡಿದರು.
ಪ್ರತಾಪ್ ಸಿಂಹ ಅವರಿಗೆ ಈ ದೇಶಕ್ಕೆ ಕ್ರೈಸ್ತ ಸಮುದಾಯ ನೀಡಿದ ಕೊಡುಗೆ ಬಗ್ಗೆ ತಿಳಿದಿದ್ದರೆ ಇಂತಹ ಹೇಳಿಕೆ ನೀಡುತ್ತಿರಲಿಲ್ಲ. ಓರ್ವ ಜನಪ್ರತಿ ಜಾತಿ-ಧರ್ಮದ ಆಧಾರದಲ್ಲಿ ಮಾತನಾಡುವುದು ಸರಿಯಲ್ಲ. ಬಿಜೆಪಿಯ ಕೆಲವು ಮುಖಂಡರಿಗೆ ಬೇರೆ ಸಮುದಾಯವನ್ನು ನಿಂದಿಸಿ, ಅವಹೇಳನ ಮಾಡುವುದೇ ಕೆಲಸವಾಗಿ ಬಿಟ್ಟಿದೆ. ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡದಿದ್ದರೆ ಅವರಿಗೆ ನಿದ್ದೆಯೇ ಬರುವುದಿಲ್ಲ. ಪ್ರತಾಪ್ ಸಿಂಹ ಅವರಿಗೆ ತಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದೇ ಮರೆತು ಹೋಗಿದೆ. ಅವರು ಸರ್ವಾಧಿಕಾರಿ ಆಡಳಿತದಂತೆ ಹೇಳಿಕೆ ನೀಡುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.