ಮಣ್ಣು ಕುಸಿತ ಪ್ರಕರಣ: ಕಾರ್ಮಿಕರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲು CITU ಒತ್ತಾಯ
ಮಂಗಳೂರು: ನಗರದ ಬಲ್ಮಠ ವಾಸುಲೇನ್ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಮಣ್ಣು ಕುಸಿತದಿಂದಾಗಿ ಸಾವನ್ನಪ್ಪಿದ ಹಾಗೂ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿರುವ ಉತ್ತರಭಾರತ ಮೂಲದ ಕಾರ್ಮಿಕರಿಬ್ಬರಿಗೆ ತಲಾ 50 ಲಕ್ಷ ರೂ.ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೇಂದ್ರ ಕಾರ್ಮಿಕ ಸಂಘಟನೆಯಾದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಎಚ್ಚರಿಕೆ ನೀಡಿದರು.
ಮಣ್ಣು ಕುಸಿತ ಘಟನೆಗೆ ನೇರ ಕಾರಣವಾದ ಬಿಲ್ಡರ್ ಹಾಗೂ ಜಿಲ್ಲಾಡಳಿತದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯವನ್ನು ಖಂಡಿಸಿ ಹಾಗೂ ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳದೆ ಕಾನೂನುಗಳನ್ನು ಉಲ್ಲಂಘಿಸುತ್ತಿರುವ ಬಿಲ್ಡರ್ ಗಳ ಗುತ್ತಿಗೆದಾರಿಗೆ ಮೂಗುದಾರ ತೊಡಿಸಬೇಕಾದ ಕಾರ್ಮಿಕ ಅಧಿಕಾರಿಗಳ ವಿರುಧ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿ CITU ಹಾಗೂ ಕಟ್ಟಡ ಕಾರ್ಮಿಕರ ಸಂಘಟನೆ ಗಳ ಜಂಟಿ ನೇತ್ರತ್ವದಲ್ಲಿ ನಗರದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರಾಣಹಾನಿಗೆ ಕಾರಣವಾಗಿರುವ ಈ ದುರ್ಘಟನೆಯನ್ನು ಕ್ರಿಮಿನಲ್ ಸೆಕ್ಷನ್ ಗಳಡಿ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಬೇಕು. ನಗರದೆಲ್ಲೆಡೆ ಬಹುಮಹಡಿ ಕಟ್ಟಡಗಳು ವೇಗವಾಗಿ ತಲೆ ಎತ್ತುತ್ತಿದ್ದು, ಅದರ ನಿರ್ಮಾಣ ಕೆಲಸಕ್ಕೆ ಪ್ರಜ್ಞಾಪೂರ್ವಕವಾಗಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ನಿರಾಕರಿಸಿ ಅತ್ಯಂತ ನಿಕೃಷ್ಟ ಕೂಲಿಗೆ ಉತ್ತರ ಬಾರತದ ವಲಸೆ ಕಾರ್ಮಿಕರನ್ನು ಕರೆತಂದು ಯಾವುದೇ ನಿಯಮಗಳನ್ನು ಪಾಲಿಸದೆ ದುಡಿಸಲಾಗುತ್ತದೆ. ಇಂತಹ ಕಾರ್ಮಿಕರ ಸಂಪೂರ್ಣ ವಿವರ ಕಾರ್ಮಿಕ ಇಲಾಖೆಯಲ್ಲಿ ಲಭ್ಯ ಇರಬೇಕೆಂದಿದ್ದರೂ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಹಾಗೂ ಬಿಲ್ಡರ್ ಗಳು ಅಂತಹ ಯಾವುದೇ ಮಾಹಿತಿಗಳನ್ನು ನೀಡದೆ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದ್ದಾರೆ. ಕಾರ್ಮಿಕ ಇಲಾಖೆಯೂ ಕೂಡ ಈ ಬಗ್ಗೆ ತೀರಾ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ಬಿ.ಎಂ.ಭಟ್ ರವರು ಮಾತನಾಡಿ, ಇಂತಹ ಘಟನೆಗಳು ದಕ.ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇಂತಹ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ದುಡಿಯುವ ಯಾವುದೇ ಪ್ರದೇಶದ ಬಡಪಾಯಿ ಕಾರ್ಮಿಕರು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜೀವ ತೆರುವುದು, ಅಂಗ ವೈಕಲ್ಯಕ್ಕೆ ಒಳಗಾಗುವುದು ಸಾಮಾನ್ಯ ಎಂಬಂತಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಮಂಗಳೂರು ನಗರದಲ್ಲಿ ಬಹುಮಹಡಿ ನಿರ್ಮಾಣ ಕಾಮಗಾರಿ ಸಂದರ್ಭ ಈ ರೀತಿಯ ಅವಘಡ ಸಂಭವಿಸುವುದು ಪದೇ ಪದೆ ನಡೆಯುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಬೇಕು, ನಿಯಮ ಉಲ್ಲಂಘಿಸುವ ಬಿಲ್ಡರ್ ಗಳು, ಗುತ್ತಿಗೆದಾರರನ್ನು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಇಂತಹ ಘಟನೆಗಳಿಗೆ ಹೊಣೆಗಾರರನ್ನಾಗಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ CITU ಜಿಲ್ಲಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿ, ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡರಾದ ಜಯಂತ ನಾಯಕ್ ಮಾತನಾಡಿ, ಕಾರ್ಮಿಕರ ಸಾವಿಗೆ ಕಾರಣವಾದ ಜಿಲ್ಲಾಡಳಿತ, ಮನಪಾ,ಕಾರ್ಮಿಕ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ಮುಖಂಡರಾದ ಸುಕುಮಾರ್, ಸುಂದರ ಕುಂಪಲ, ರಮಣಿ, ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ರಾಧಾ ಮೂಡಬಿದ್ರೆ,ವಸಂತಿ ಕುಪ್ಪೆಪದವು, ಭಾರತಿ ಬೋಳಾರ, ರೋಹಿದಾಸ್, ನೋಣಯ್ಯ ಗೌಡ, ಪ್ರಮೋದಿನಿ, ಮುಸ್ತಾಫ, ಜಯಲಕ್ಷ್ಮಿ, ಲೋಲಾಕ್ಷಿ ಬಂಟ್ವಾಳ, ನೆಬಿಸಾ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲಾ ನಾಯಕರಾದ ರವಿಚಂದ್ರ ಕೊಂಚಾಡಿ, ರಾಮಚಂದ್ರ ಪಜೀರ್, ಉಮೇಶ್,ಶಶಿಧರ್ ಶಕ್ತಿನಗರ, ನಾಗೇಶ್ ಕೋಟ್ಯಾನ್, ಅಶೋಕ್ ಸಾಲ್ಯಾನ್, ಲೋಕೇಶ್ ಎಂ, ಜಯಶೀಲ ವಾಮಂಜೂರು, ಸೀತಾರಾಮ ಶೆಟ್ಟಿ, ಲೋಕೇಶ್ ಕುದ್ಯಾಡಿ, ರಾಮಚಂದ್ರ ಬೆಳ್ತಂಗಡಿ ಮುಂತಾದವರು ಭಾಗವಹಿಸಿದ್ದರು.
ಹೋರಾಟವನ್ನು ಬೆಂಬಲಿಸಿ ರೈತ ಸಂಘಟನೆಯ ಸದಾಶಿವದಾಸ್, DHS ಪ್ರಮುಖರಾದ ಕೃಷ್ಣ ತಣ್ಣೀರು ಬಾವಿ, ತಿಮ್ಮಯ್ಯ ಕೊಂಚಾಡಿ, ಆದಿವಾಸಿ ಸಂಘಟನೆಯ ಪ್ರಶಾಂತ್ ಕಂಕನಾಡಿ, ಯುವಜನ ಸಂಘಟನೆಯ ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಮಾಧುರಿ ಬೋಳಾರ, ಮಹಿಳಾ ಸಂಘಟನೆಯ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಯೋಗಿತಾ ಉಳ್ಳಾಲ, ವಿದ್ಯಾರ್ಥಿ ನಾಯಕರಾದ ವಿನುಷಾ ರಮಣರವರು ಭಾಗವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: