ಸೇತುವೆ ಮಾಡಿ ಹಲಗೆ ಹಾಕೋದನ್ನೇ ಮರೆತ ಅಧಿಕಾರಿಗಳು: ಕಬ್ಬಿಣದ ರಾಡ್ ಗಳ ಮೇಲೆ ಸಾವಿನ ನಡಿಗೆ
ಚಿಕ್ಕಮಗಳೂರು: ಕಬ್ಬಿಣದ ಸೇತುವೆ ಮಾಡಿದ ಅಧಿಕಾರಿಗಳು ಹಲಗೆ ಹಾಕೋದನ್ನೇ ಮರೆತಿದ್ದಾರೆ. ಇದೀಗ ಹಲಗೆ ಇಲ್ಲದ ಸೇತುವೆಯಲ್ಲಿ ಜನರು ನಿತ್ಯ ಸಾವಿನ ನಡಿಗೆ ಮಾಡುತ್ತಲೇ ಇದ್ದಾರೆ.
ಈ ಘಟನೆ ನಡೆದಿರೋದು ಕೊಪ್ಪ ತಾಲೂಕಿನ ಅತ್ತಿಕೂಡಿಗೆ, ಅಬ್ಬಿಕಲ್ಲು ಗ್ರಾಮದಲ್ಲಿ. ಇಲ್ಲಿನ ಜನರಗೋಳು ಕೇಳುವವರೇ ಇಲ್ಲ ಎಂಬಂತಾಗಿದೆ. ಈ ಸೇತುವೆಯನ್ನು ಕಂಡರೆ, ಸರ್ಕಾರ ಜನರಿಗೆ ಒಳ್ಳೆದ್ ಮಾಡೋಕೆ ಕೆಲ್ಸ ಮಾಡುತ್ತೋ ದುಡ್ ಮಾಡೋಕೆ ಕೆಲ್ಸ ಮಾಡುತ್ತೋ…? ಅನ್ನೋ ಪ್ರಶ್ನೆ ಮೂಡದೇ ಇರಲು ಸಾಧ್ಯವೇ ಇಲ್ಲ.
ಇದು ಹಣ ಕೊಡದ ಸರ್ಕಾರದ ತಪ್ಪೋ, ಅಥವಾ ಕೆಲಸ ಮಾಡದ ಅಧಿಕಾರಿಗಳ ತಪ್ಪೋ ಎಂದು ಇಲ್ಲಿನ ಜನರು ಪ್ರಶ್ನಿಸುವಂತಾಗಿದೆ. ಈ ಅಪೂರ್ಣ ಸೇತುವೆಯಲ್ಲಿ ಮಲೆನಾಡಿಗರದ್ದು ನಿತ್ಯ ಯಮನ ಎಮ್ಮೆ ಮೇಲೆ ಸವಾರಿ ಮಾಡುವ ಬದುಕಾಗಿದೆ.
ಕಬ್ಬಿಣದ ಸೇತುವೆ ಮಾಡಿದ ಅಧಿಕಾರಿಗಳು ಹಲಗೆ ಹಾಕೋದ್ನೆ ಮರೆತಿದ್ದಾರೆ. ಮೂರು ವರ್ಷಗಳಿಂದ ಮಲೆನಾಡಿಗರದ್ದು ನಿತ್ಯ ಸಾವಿನ ಬದುಕಾಗಿದೆ. ಕಬ್ಬಿಣದ ರಾಡ್ ಗಳ ಮೇಲೆ ಸಾವಿನ ನಡಿಗೆ ನಡೆಸುವಂತಾಗಿದೆ. ಒಂದೊಂದು ರಾಡಿಗೂ 2 ಅಡಿ ಗ್ಯಾಪ್ ಇದೆ. ಎಲ್ಲಾದ್ರೂ ಕೆಳಗೆ ಬಿದ್ದು ಬಿಟ್ಟರೆ ಸೇತುವೆ ಕೆಳಗೆ ಕಲ್ಲು-ಬಂಡೆಗಳ ಜಲಪಾತಕ್ಕೆ ಸಿಲುಕಿ ಖೇಲ್ ಖತಂ ಆಗೋದು ಗ್ಯಾರೆಂಟಿ.
ಪ್ರವಾಸಿಗರು ಈ ಅರ್ಧಂಬರ್ಧ ಸೇತುವೆ ಮೇಲೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ…! ನಾಳೆ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಸರ್ಕಾರವೇ…? ಎಂದು ಸರ್ಕಾರದ ವಿರುದ್ಧ ಹಳ್ಳಿಗರು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಸೇತುವೆಗೆ ಹಾಕಬೇಕಿದ್ದ ಹಲಗೆಯ ಕಾಸು ಕಂಡವರ ಜೇಬಿಗೆ ಸೇರಿದೆ. ಹಾಗಾಗಿ ಇನ್ನೂ ಕೆಲಸ ಪೂರ್ಣಗೊಂಡಿಲ್ಲ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: