ಅಖಿಲೇಶ್ ರಿಂದ ಬಿಜೆಪಿಯ ಭಿನ್ನಮತೀಯರಿಗೆ ಮಾನ್ಸೂನ್ ಆಫರ್: ಕಮಲ ಪಾಳಯಕ್ಕೆ ಶಾಕ್..!
ಉತ್ತರ ಪ್ರದೇಶದಲ್ಲಿ ಬಿಜೆಪಿ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಜೆಪಿಯ ಭಿನ್ನಮತೀಯರಿಗೆ ಮಾನ್ಸೂನ್ ಅಫರ್ ನೀಡಿದ್ದಾರೆ. ನೂರು ಮಂದಿಯನ್ನು ಕರೆದುಕೊಂಡು ಬನ್ನಿ, ಸರ್ಕಾರವನ್ನು ರಚಿಸಿ” ಎಂದು ಬಿಜೆಪಿ ಭಿನ್ನರಿಗೆ ನೇರವಾಗಿ ಆಹ್ವಾನಿಸಿದ್ದಾರೆ.
“ಮಾನ್ಸೂನ್ ಆಫರ್: ನೂರು ಮಂದಿಯನ್ನು ಕರೆದುಕೊಂಡು ಬನ್ನಿ, ಸರ್ಕಾರವನ್ನು ರಚಿಸಿ” ಎಂದು ಅಖಿಲೇಶ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಪಕ್ಷದ ಮುಖಂಡರ ನಡುವೆ ಮನಸ್ತಾಪವಾಗಿರುವ ಕಾರಣ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಒಟ್ಟು 80 ಸೀಟುಗಳ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 33 ಸ್ಥಾನಗಳನ್ನು ಮಾತ್ರ ಗೆದ್ದಿತ್ತು.
ಬಿಜೆಪಿಯ ಅಂತಃಕಲಹದಲ್ಲಿ ಜನರ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ ಎಂದು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಹೇಳಿದ್ದರು.
“ಬಿಜೆಪಿ ಅಧಿಕಾರ, ಸರ್ಕಾರ ಹಾಗೂ ಆಡಳಿತಕ್ಕಾಗಿ ಕಿತ್ತಾಡುತ್ತಿದ್ದರೆ, ಉತ್ತರ ಪ್ರದೇಶದ ಜನರಿಗೆ ತೊಂದರೆಯಾಗುತ್ತದೆ. ಬಿಜೆಪಿ ಈ ಮೊದಲು ಇತರ ಪಕ್ಷಗಳನ್ನು ಹಾಳು ಮಾಡುತ್ತಿತ್ತು. ಆದರೆ ಈಗ ತನ್ನ ಪಕ್ಷದಲ್ಲಿಯೇ ಅದೇ ಬೆಳವಣಿಗೆ ನಡೆಯುತ್ತಿದೆ. ಬಿಜೆಪಿಯಲ್ಲಿ ಯಾರೊಬ್ಬರು ಸಾರ್ವಜನಿಕರ ಬಗ್ಗೆ ಚಿಂತಿಸುತ್ತಿಲ್ಲ” ಎಂದು ಅಖಿಲೇಶ್ ಯಾದವ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಲಖನೌದಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಉತ್ತರ ಪ್ರದೇಶ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರು ಸರ್ಕಾರಕ್ಕಿಂತ ಪಕ್ಷ ದೊಡ್ಡದು ಎಂದು ಆದಿತ್ಯನಾಥ್ ರನ್ನು ಉದ್ದೇಶಿಸಿ ಪರೋಕ್ಷವಾಗಿ ಹೇಳಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth