ಶಿರೂರು ಗುಡ್ಡ ಕುಸಿತದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿರುವ ಮಲಯಾಳಿಯ ಫೋನ್ ರಿಂಗ್ ಆಗ್ತಿದೆಯಂತೆ!
ಕೋಝಿಕ್ಕೋಡ್: ಕರ್ನಾಟಕದ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿರುವ ಮಲಯಾಳಿ ಚಾಲಕನ ರಕ್ಷಣೆಗೆ ಕರ್ನಾಟಕ ಸರ್ಕಾರ ಮುಂದಾಗಬೇಕು ಎಂದು ಕೇರಳದ ಮಾಧ್ಯಮಗಳು ಆಗ್ರಹಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಆಮೆಗತಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ದುರ್ಘಟನೆ ನಡೆದು ನಾಲ್ಕು ದಿನಗಳಾಗಿವೆ. ಆದರೂ ಇನ್ನೂ ಕಾರ್ಯಾಚರಣೆ ಪೂರ್ಣಗೊಂಡಿಲ್ಲ. ಕರ್ನಾಟಕ ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚು ಒತ್ತು ನೀಡಿಲ್ಲ, ಮಣ್ಣಿನಡಿಯಲ್ಲಿ ಸಿಲುಕಿರುವವರಲ್ಲಿ ಇನ್ನೂ ಜೀವಂತ ಇರುವ ಸಾಧ್ಯತೆಗಳಿವೆ ಎಂದು ಕೇರಳ ಮಾಧ್ಯಮಗಳು ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಕೇರಳದ ಮಾಧ್ಯಮಗಳ ವರದಿಗಳ ಪ್ರಕಾರ, ಕೋಝಿಕ್ಕೋಡ್ ಮೂಲದ ಅರ್ಜುನ್ ಎಂಬಾತ ಕರ್ನಾಟಕದ ಶಿರೂರಿನಲ್ಲಿ ಗುಡ್ಡ ಕುಸಿದ ಪ್ರಕರಣದಲ್ಲಿ ಸಿಲುಕಿದ್ದು, ಲಾರಿ ಸಹಿತವಾಗಿ ಆತ ಮಣ್ಣಿನಡಿಯಲ್ಲಿ ಸಿಲುಕಿದ್ದಾನೆ. ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಇನ್ನೂ ಆತ ಸೇರಿದಂತೆ ಇನ್ನೂ ಮಣ್ಣಿನಡಿಯಲ್ಲಿ ಸಿಲುಕಿದವರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿಲ್ಲ. ಲಾರಿಯ ಜಿಪಿಎಸ್ ಪರಿಶೀಲಿಸಿದಾಗ ದುರಂತ ಸ್ಥಳದಲ್ಲಿ ಲಾರಿ ಇರುವುದು ತಿಳಿದು ಬಂದಿದೆ. ಲಾರಿ ಚಾಲಕನ ಕುಟುಂಬಸ್ಥರು ತೀವ್ರ ಶೋಕದಲ್ಲಿದ್ದಾರೆ. ನಮಗೆ ಸಹಾಯ ಮಾಡುವವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
ಫೋನ್ ರಿಂಗ್ ಆಗ್ತಿದೆ:
ಮಣ್ಣಿನಡಿಯಲ್ಲಿ ಸಿಲುಕಿರುವ ಅರ್ಜುನ್ ನ ಫೋನ್ ರಿಂಗ್ ಆಗ್ತಿದೆಯಂತೆ. ಅರ್ಜುನ್ ಅವರ ಪತ್ನಿ ಕೃಷ್ಣ ಪ್ರಿಯಾ ಅವರು ಪತಿಯ ನಂಬರ್ ಗೆ ಕರೆ ಮಾಡಿದಾಗ ಮೊಬೈಲ್ ರಿಂಗ್ ಆಗುತ್ತಿದೆ. ಆದರೆ ಯಾರೂ ರಿಸಿವ್ ಮಾಡುತ್ತಿಲ್ಲ. ಕೇರಳ ಸರ್ಕಾರ ತಕ್ಷಣವೇ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಅರ್ಜನ್ ಅವರ ಪತ್ನಿ ಹಾಗೂ ಸಹೋದರಿ ಆಗ್ರಹಿಸಿದ್ದಾರೆ.
ಅರ್ಜುನ್ ನಾಪತ್ತೆಯಾಗಿರುವ ಮಾಹಿತಿ ತಿಳಿದಾಗ ತಡವಾಗಿದ್ದು, ಅಧಿಕಾರಿಗಳ ಮಟ್ಟದಲ್ಲಿ ಮಧ್ಯಪ್ರವೇಶ ಆರಂಭವಾಗಿದೆ ಎಂದು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಹೇಳಿದ್ದಾರೆ. ಕರ್ನಾಟಕ ಸಾರಿಗೆ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: