ಆಹಾರಕ್ಕಾಗಿ ಪರಿತಪಿಸುತಿದೆ ಮಲೆಕುಡಿಯ ಕುಟುಂಬ - Mahanayaka

ಆಹಾರಕ್ಕಾಗಿ ಪರಿತಪಿಸುತಿದೆ ಮಲೆಕುಡಿಯ ಕುಟುಂಬ

malekudia
29/07/2024

ಕೊಟ್ಟಿಗೆಹಾರ.  ಒಂದು ತಿಂಗಳಿಂದ ಎಡಬಿಡದೆ ಸುರಿಯುತ್ತಿರುವ ಮಹಾಮಳೆಗೆ ಮಲೆನಾಡು ಅಕ್ಷರಸಹ ಸ್ತಬ್ಧವಾಗಿ ಹೋಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಹೊಳೆ ಕೊಡುಗೆ ಗ್ರಾಮದ ಮಲೆಕುಡಿಯ ಕುಟುಂಬ ಒಂದು ಆಹಾರಕ್ಕಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಗ್ರಾಮದಲ್ಲಿ ನಾಲ್ಕೈದು ಮನೆಗಳಿದ್ದು ಈ ಮನೆಗಳಿಗೆ ಭದ್ರಾ ನದಿಯ ನೀರು ಮೂರು ಕಡೆ ಆವರಿಸಿದೆ. ಇನ್ನೊಂದು ಕಡೆ ಖಾಸಗಿ ತೋಟವಿದ್ದು, ಇದರಿಂದ ಮಲೆ ಕುಡಿಯ ಕುಟುಂಬಕ್ಕೆ ದಾರಿ ಇಲ್ಲದೆ ಪರಿತಪಿಸುತಿದೆ.  ಇಷ್ಟು ವರ್ಷಗಳಲ್ಲಿ ಈ ರೀತಿಯ ಸಮಸ್ಯೆ ಎಂದು ಎದುರಾಗಿರಲಿಲ್ಲ. ಯಾಕೆಂದರೆ ಮಳೆ ಬಿಟ್ಟುಬಿಟ್ಟು ಬರುತ್ತಿತ್ತು. ಆದರೆ ಈ ವರ್ಷ ಒಂದು ತಿಂಗಳಿಂದ ಬಿಟ್ಟು ಬಿಡದೆ ಬರುತ್ತಿರುವ ವರುಣನ ಅಬ್ಬರಕ್ಕೆ ಭದ್ರಾ ನದಿ ರಭಸದಿಂದ ಹರಿಯುತ್ತಿದ್ದು ಅದನ್ನು ದಾಟಲು ತೆಪ್ಪವನ್ನು ಬಳಸಲು ಆಗುತ್ತಿಲ್ಲ ಪ್ರತಿ ವರ್ಷ ಮಳೆಗಾಲದಲ್ಲಿ ಮಳೆ ಬಿಡುವು ಕೊಟ್ಟಾಗ ತೆಪ್ಪದಲ್ಲಿ ಹೋಗಿ ಆಹಾರ ಸಾಮಗ್ರಿಗಳನ್ನು ತರುತ್ತಿದ್ದರು. ಈ ಮಳೆಗಾಲದಲ್ಲಿ ಒಂದು ತಿಂಗಳಿಗೆ ಆಗುವಷ್ಟು ದಿನಸಿಯನ್ನು ಅವರು ತಂದಿದ್ದರು. ಆದರೆ ಅದು ಈಗ ಖಾಲಿಯಾಗಿದ್ದು ಆಹಾರವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

15 ದಿನಗಳಿಂದ ವಿದ್ಯುತ್ ಇಲ್ಲದೆ ಅವರ ಸಮಸ್ಯೆಯನ್ನು ಹೇಳಿಕೊಳ್ಳಲು ನೆಟ್ವರ್ಕ್ ಸಹ ಇಲ್ಲದಂತಾಗಿದೆ. ದೇಶ ಇಷ್ಟು ಮುಂದುವರಿದಿದ್ದರು ಆಹಾರಕ್ಕಾಗಿ ಪರಿತಪಿಸುವ ಕುಟುಂಬದ ರೋಧನೆ ಮಾತಿನಲ್ಲಿ ಹೇಳಲು ಅಸಾಧ್ಯ. ಹಲವಾರು ವರ್ಷಗಳಿಂದ ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಎಲ್ಲರಿಗೂ ಹೇಳಿ ಸಾಕಾಗಿ ಹೋಗಿದೆ. ಮಳೆಗಾಲದಲ್ಲಿ ದ್ವೀಪವಾಗುವ ನಮ್ಮ ಗ್ರಾಮಕ್ಕೆ ತೂಗು ಸೇತುವೆ ಮಾಡಿಕೊಡಲು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದೇವೆ ಆದರೆ ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು   ಮಲೆಕುಡಿಯ  ಕುಟುಂಬದ ಸದಸ್ಯ ಸತೀಶ್ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ