ಕೆಪಿಎಸ್ ಸಿ ಮಾತ್ರವಲ್ಲ ಯುಪಿಎಸ್ ಸಿ ಕೇಂದ್ರ ಪರೀಕ್ಷೆಗಳಲ್ಲೂ ಕನ್ನಡಿಗರಿಗೆ ಅನ್ಯಾಯ: ಸಿಎಂಗೆ ವಿಶೇಷ ಮನವಿ ಮಾಡಿದ ಅಕ್ಕ ಐಎಎಸ್ ನ ಡಾ.ಶಿವಕುಮಾರ
ಬೆಂಗಳೂರು: ಕೆಪಿಎಸ್ ಸಿ ಪರೀಕ್ಷೆಯಲ್ಲಿ ಅಮೂಲಾಗ್ರವಾಗಿ ಸುಧಾರಣೆಯಾಗಬೇಕು ಎಂದು ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕರಾದ ಡಾ.ಶಿವಕುಮಾರ ಒತ್ತಾಯಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡಿಗರಿಗೆ ಕೆಪಿಎಸ್ ಸಿ ದ್ರೋಹ ಮಹಾಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಒಂದು ವಾರಗಳಿಂದ ನೀವು(ಕನ್ನಡ ಪರ ಹೋರಾಟಗಾರರು) ಬರೆದ ಬರಹಗಳು, ಆಕ್ರೋಶ, ಟೀಕೆಗಳು ಸರ್ಕಾರವನ್ನು ಮುಟ್ಟಿದೆ. ಸಿಎಂ ಅವರು ಮರು ಪರೀಕ್ಷೆಗೆ ಆದೇಶ ಮಾಡಿದ್ದಾರೆ. ಅದು ತಾತ್ಕಾಲಿಕವಾದ ಕ್ರಮ ಅದನ್ನು ಸ್ವಾಗತಿಸೋಣ, ಶಾಶ್ವತವಾಗಿ ಕೆಪಿಎಸ್ ಸಿಯ ಸುಧಾರಣೆಯಾಗಬೇಕು. ಕನ್ನಡದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲರೂ ಹೋರಾಟ ಮಾಡೋಣ ಎಂದರು.
ಕನ್ನಡಿಗರಿಗೆ ಅಲ್ಲೂ ತೊಂದರೆ, ಇಲ್ಲೂ ತೊಂದರೆ:
ಯುಪಿಎಸ್ ಸಿ ಸೇರಿದಂತೆ ಯಾವುದೇ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪ್ರಶ್ನೆ ಪತ್ರಿಕೆಗಳಿರುತ್ತವೆ. ಉತ್ತರ ಭಾರತದ 8 ರಾಜ್ಯಗಳವರು ತಮ್ಮ ಮಾತೃ ಭಾಷೆಗಳಲ್ಲಿ ಪರೀಕ್ಷೆಯನ್ನು ಪಾಸ್ ಮಾಡುತ್ತಾರೆ. ನಾವೆಲ್ಲರೂ ನಮ್ಮದಲ್ಲದ ಇನ್ನೊಂದು ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯುತ್ತೇವೆ. ಹಾಗಾಗಿ ನಮಗೆ ಅಲ್ಲಿ ಕಷ್ಟ ಇದೆ. ಆದ್ರೆ ಇಲ್ಲಿ ಕನ್ನಡದಲ್ಲಿ ಪರೀಕ್ಷೆ ಮಾಡೋಣ ಅಂದ್ರೆ, ಕನ್ನಡವನ್ನು ಸರಿಯಾಗಿ ಅನುವಾದ ಮಾಡದೇ, ಕನ್ನಡಕ್ಕೆ ಮಾನ್ಯತೆ ಕೊಡದೇ ಇಂಗ್ಲಿಷ್ ನ್ನೇ ಅವಲಂಬಿಸಬೇಕಾದ ಸಂದರ್ಭವನ್ನು ಸೃಷ್ಟಿ ಮಾಡಿದ್ದಾರೆ. ಕನ್ನಡಿಗರಿಗೆ ಅಲ್ಲೂ ತೊಂದರೆ ಇಲ್ಲೂ ತೊಂದರೆ. ಎರಡು ರೀತಿಯಲ್ಲಿ ಅನ್ಯಾಯವಾಗ್ತಿದೆ ಎಂದು ಶಿವಕುಮಾರ ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಹಿಂದುಳಿದ ವರ್ಗದಿಂದ ಬಂದವರು, ಗ್ರಾಮೀಣ ಭಾಗದಿಂದ ಬಂದವರು, ಕನ್ನಡಪರ ಸಮಾಜವಾದಿ ಹೋರಾಟದಿಂದ ಬಂದವರು. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕರ್ನಾಟಕ ವಿಧಾನಸಭೆಯಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷದ ಎಲ್ಲ ಸದಸ್ಯರು ಒಕ್ಕೊರಳಿನಿಂದ ತೀರ್ಮಾನ ತೆಗೆದುಕೊಳ್ಳಬೇಕು, ಕೇಂದ್ರ ಸರ್ಕಾರದ ಎಲ್ಲ ಪರೀಕ್ಷೆಗಳು ಕೂಡ ನಿಮಗೆ(ಹಿಂದಿ ಭಾಷಿಗರಿಗೆ) ಹೇಗೆ ಮಾತೃ ಭಾಷೆಯಲ್ಲಿ ಬರೆಯುವ ಅವಕಾಶವಿದೆಯೋ, ಅದೇ ರೀತಿ ನಮಗೂ(ಕನ್ನಡಿಗರಿಗೆ) ಅವಕಾಶಕೊಡಿ, ಎಂದು ನಿರ್ಧಾರ ತೆಗೆದುಕೊಳ್ಳಿ. ಆ ನಿರ್ಣಯ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಿ. ಆ ಮೂಲಕ ದೊಡ್ಡ ಬದಲಾವಣೆಯಾಗಲಿ ಎಂದು ಅವರು ಒತ್ತಾಯಿಸಿದರು.
ಕೆಪಿಎಸ್ ಸಿ ಅಮೂಲಾಗ್ರ ಸುಧಾರಣೆಗೆ ಪರಿಹಾರ:
ಕೆಪಿಎಸ್ ಸಿ ಅಮೂಲಾಗ್ರವಾಗಿ ಸುಧಾರಣೆಯಾಗಬೇಕು. ಅದಕ್ಕೆ ಪರಿಹಾರ ಏನಂದ್ರೆ, ಎಲ್ಲ ರಾಜಕೀಯ ಪಕ್ಷಗಳು ಕೂಡ ತಮ್ಮ ಹಿಂಬಾಲಕರನ್ನು ತಮ್ಮ ಸಿದ್ಧಾಂತ, ಪಕ್ಷದ ಪರವಾಗಿರುವವರನ್ನು ಮೆಂಬರ್ ಗಳನ್ನಾಗಿ ಮಾಡುತ್ತಾರೆ. ಇದರಿಂದಾಗಿ ಸಮಸ್ಯೆಗಳು ಸೃಷ್ಟಿಯಾಗಿವೆ. ಹಾಗಾಗಿ ತುಂಬಾ ದಕ್ಷರನ್ನು, ಪ್ರಾಮಾಣಿಕರನ್ನು ಎಲ್ಲ ಸಮುದಾಯಗಳಿಂದ ಹುಡುಕಿ ನೇಮಿಸಿದರೆ, ಆಗ ಯುಪಿಎಸ್ ಯಂತೆ ಕೆಪಿಎಸ್ ಸಿ ಕೂಡ ಕಾರ್ಯ ನಿರ್ವಹಿಸಬಹುದು. ಈ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಕೆಪಿಎಸ್ ಸಿಯನ್ನು ಸುಧಾರಿಸಲಿ. ಕನ್ನಡ ಪರ ಕಾಳಜಿ ಇರುವ ಅಧಿಕಾರಿಗಳನ್ನೇ ನೇಮಿಸಲಿ. ಆ ಮೂಲಕ ಕೆಪಿಎಸ್ ಸಿಯನ್ನು ಸುಧಾರಿಸಲಿ ಎಂದು ಶಿವಕುಮಾರ ಮನವಿ ಮಾಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: