ಪೋಷಕರ ಜೊತೆಗೆ ಬಸ್ ನಿಲ್ದಾಣದಲ್ಲಿ ಮಲಗಿದ್ದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ!
ಹಾಸನ: “ಸುವರ್ಣ ಕರ್ನಾಟಕ” ಹೆಸರು ಎಷ್ಟು ಚೆನ್ನಾಗಿದೆ ಅಲ್ವೇ? ಆದ್ರೆ, ರಾತ್ರಿ ವೇಳೆ ಕರ್ನಾಟಕದ ಬಸ್ ನಿಲ್ದಾಣಗಳನ್ನು ನೋಡಿದರೆ, ಎಷ್ಟು ಜನ ನಿರಾಶ್ರಿತರು ಇನ್ನೂ ಇದ್ದಾರೆ. ಅವರಿಗೆ ಕನಿಷ್ಟ ಒಂದು ರಾತ್ರಿ ಸುರಕ್ಷಿತವಾಗಿ ಮಲಗುವಂತಹ ವ್ಯವಸ್ಥೆಗಳು ಇಲ್ಲಿಲ್ಲ ಎನ್ನುವುದು ಸತ್ಯ.
ಪೋಷಕರ ಜೊತೆಗೆ ಮಲಗಿದ್ದ ಅಲೆಮಾರಿ ಸಮುದಾಯದ ಬಾಲಕಿಯನ್ನು ಹೊತ್ತೊಯ್ದ ಕಾಮುಕನೋರ್ವ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಹಾಸನ ನಗರ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹಾಸನ ಹೊಸ ಬಸ್ ನಿಲ್ದಾಣದಲ್ಲಿ ಕುಟುಂಬವೊಂದು ಬೀಡುಬಿಟ್ಟಿತ್ತು. ರಾತ್ರಿ ತಂದೆ-ತಾಯಿಯ ಜೊತೆಗೆ ಮಲಗಿದ್ದ ಬಾಲಕಿಯನ್ನು ಹೊತ್ತೊಯ್ದ ಕಾಮುಕ ಅತ್ಯಾಚಾರ ನಡೆಸಿದ್ದಾನೆ.
ಘಟನೆಯ ದೃಶ್ಯ ಬಸ್ ನಿಲ್ದಾಣದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ ಸಂತ್ರಸ್ತ ಬಾಲಕಿಯನ್ನು ಹಾಸನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿಯೂ, ಟಿವಿ ಮಾಧ್ಯಮಗಳಲ್ಲಿಯೂ ಚರ್ಚೆಯೇ ಆಗುವುದಿಲ್ಲ. ಶ್ರೀಮಂತರ ನಾಚಿಕೆಗೆಟ್ಟ ಸಿಡಿ ವಿಚಾರಗಳಿಗೆ ಸುದ್ದಿ ಮಾಧ್ಯಮಗಳ ಸಮಯ ಸಾಕಾಗುತ್ತಿಲ್ಲ. ಇನ್ನೂ ಅಲೆಮಾರಿ ಸಮುದಾಯಗಳ ಹೆಣ್ಣು ಮಕ್ಕಳ ವಿಚಾರ ಮಾತನಾಡುವವರು ಯಾರು? ಎಂಬ ಪ್ರಶ್ನೆಗಳು ಕೇಳಿ ಬಂದಿದೆ.
ರಾಜ್ಯ ಸರ್ಕಾರವು ರಾತ್ರಿ ವೇಳೆಯಲ್ಲಿ ನಿರಾಶ್ರಿತ ಮಹಿಳೆಯರು ಹಾಗೂ ಮಕ್ಕಳಿಗೆ ತಂಗಲು ಪ್ರತಿ ಬಸ್ ನಿಲ್ದಾಣಗಳ ಪಕ್ಕದಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದರೆ, ಮಹಿಳೆಯರು ಸ್ವಲ್ಪವಾದರೂ ಸುರಕ್ಷಿತವಾಗಿರಲು ಸಾಧ್ಯ. ಈ ಬಗ್ಗೆ ಮಹಿಳಾ ಸಂಘಗಳು ಇನ್ನಾದರೂ ನಿದ್ದೆಯಿಂದ ಎದ್ದು, ಹೋರಾಟ ಮಾಡಿದರೆ ಉತ್ತಮ.