ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ...! - Mahanayaka
4:12 PM Wednesday 5 - February 2025

ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

ksrtc
09/01/2025

ಕೊಟ್ಟಿಗೆಹಾರ: ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರಿ ಡಕೋಟ ಬಸ್ ಗಳ ಸಂಖ್ಯೆ ಹೆಚ್ಚಾಗಿ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು ಆತಂಕಕ್ಕೀಡಾಗುವಂತಾಗಿದೆ.

ಬಯಲುಸೀಮೆ ಭಾಗದಲ್ಲಿ ಬಸ್ ಕೆಟ್ಟು ನಿಂತರೆ ಭಯಬೀಳುವ ಅಗತ್ಯವಿಲ್ಲ. ಆದರೆ, ಮಲೆನಾಡಲ್ಲಿ, ಅದರಲ್ಲೂ ಕಾಡಿನ ಮಾರ್ಗದಲ್ಲಿ ಬಸ್ ಕೆಟ್ಟರೆ ಜನ ಆತಂಕಕ್ಕೀಡಾಗಬೇಕಾಗುತ್ತದೆ. ಇಂದು ಕೂಡ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಚಾರ್ಮಾಡಿ ಘಾಟಿಯಂತಹಾ ದಟ್ಟ ಕಾನನದ ಮಧ್ಯೆ ಕೆಟ್ಟು ನಿಂತಿದ್ದು, ಸಾರ್ವಜನಿಕರ ಆಕ್ರೋಶ–ಆತಂಕಕ್ಕೆ ಕಾರಣವಾಗಿದೆ.

ಚಾರ್ಮಾಡಿ ಘಾಟಿ ದಟ್ಟ ಕಾನನದ ಮಾರ್ಗ. ಈ ಮಾರ್ಗದ ಸಂಚಾರ ಹಗಲು–ರಾತ್ರಿ ಎರಡೂ ಹೊತ್ತಲ್ಲೂ ಕಷ್ಟ ಹಾಗೂ ಆತಂಕವೇ ಸರಿ. ಯಾಕಂದ್ರೆ, ಚಾರ್ಮಾಡಿ ಘಾಟಿಯಲ್ಲಿ ಹಗಲು–ರಾತ್ರಿ ಎನ್ನದೆ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಕಾಡಾನೆ ಹಾವಳಿ ಇದೆ. ಕೆಲವರು ಜಸ್ಟ್ ಮಿಸ್ ಆಗಿದ್ದಾರೆ. ಕೆಲವರು ಗಾಡಿ ವಾಪಸ್ ತಿರುಗಿಸಿದ್ದಾರೆ. ಕೆಲವರು ಗಂಟೆ–ಗಂಟೆಗಟ್ಟಲೇ ನಿಂತಲ್ಲೇ ನಿಂತಿದ್ದಾರೆ. ಇಂತಹಾ ಅಪಾಯದ ರಸ್ತೆಯಲ್ಲಿ ಸರ್ಕಾರಿ ಬಸ್ ಕೆಟ್ಟು ನಿಂತಿದ್ದು ಜನ ಗ್ಯಾರಂಟಿ ಸರ್ಕಾರದ ವಾರಂಟಿ ಇಲ್ಲದ ಬಸ್ ಸಂಚಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಉಚಿತ ಬಸ್ ಸೌಲಭ್ಯ ಬೇಡ.  ಸರ್ಕಾರಿ ಬಸ್ ಗಳಿಗೆ ಕಾಯಕಲ್ಪ ಕಲ್ಪಿಸಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. ರಸ್ತೆ ಮಧ್ಯೆ ಬಸ್ ಗಳು ಕೆಟ್ಟು ನಿಂತರೆ ಈಗ ಪ್ರಯಾಣಿಕರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತೆ. ಏಕೆಂದರೆ, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬಸ್ ಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದೆ ಮತ್ತೊಂದು ಬಸ್ ಬಂದರೂ ಫುಲ್ ರಷ್ ಇರಲಿದೆ. ಆ ಬಸ್ಸಿಗೆ ಮತ್ತೊಂದು ಬಸ್ಸಿನ ಜನ ಹತ್ತಿಸಲು ಆಗಲ್ಲ. ಹಾಗಾಗಿ, ರಸ್ತೆ ಮಧ್ಯೆ ಸರ್ಕಾರಿ ಬಸ್ ಗಳು ಕೆಟ್ಟು ನಿಂತರೆ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಲಿದ್ದು, ಸರ್ಕಾರ ಸರ್ಕಾರಿ ಬಸ್ ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಭಾಗ್ಯವನ್ನ ನೀಡಿದೆ ಎಂದು ವ್ಯಂಗ್ಯವಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ