‘ಸ್ವಾಭಿಮಾನಿ ಕನ್ನಡಿಗ’ ಪ್ರಶಸ್ತಿಗೆ ಪತ್ರಕರ್ತ, ಆ್ಯಂಕರ್ ಶಂಶೀರ್ ಬುಡೋಳಿ ಆಯ್ಕೆ

‘ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಾಧಕರಿಗೆ ನೀಡಲ್ಪಡುವ ‘ಸ್ವಾಭಿಮಾನಿ ಕನ್ನಡಿಗ’ ಪ್ರಶಸ್ತಿಗೆ ಪತ್ರಕರ್ತ, ಆ್ಯಂಕರ್, ಕವಿ, ಲೇಖಕ, ಪಿಎಚ್ ಡಿ ಸ್ಕಾಲರ್ ಶಂಶೀರ್ ಬುಡೋಳಿ(Shamshir Budoli) ಆಯ್ಕೆಯಾಗಿದ್ದಾರೆ ಎಂದು ಕರವೇ ಸ್ವಾಭಿಮಾನಿ ಪಡೆ ಕೊಡಗು(Kodagu) ಜಿಲ್ಲೆಯ ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಪ್ರಕಟಣೆಯಲ್ಲಿ ಘೋಷಿಸಿದ್ದಾರೆ.
ಇದೇ ಫೆಬ್ರವರಿ 16ರಂದು ಪೆರಾಜೆಯಲ್ಲಿ ನಡೆಯಲಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ 50ರ ಸಂಭ್ರಮ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಶಂಶೀರ್ ಬುಡೋಳಿ ಅವರು ಮಾಧ್ಯಮ ಕ್ಷೇತ್ರದಲ್ಲಿ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕರ್ನಾಟಕ ಯುವರತ್ನ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ, ಮಾಧ್ಯಮ ಸೇವಾರತ್ನ, ಜನಪ್ರಿಯ ಪುರಸ್ಕಾರ ಸೇರಿ ವಿವಿಧ ಪುರಸ್ಕಾರಗಳನ್ನು ಪಡೆದಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯರಾಗಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯದ 11 ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.
ಬ್ಯಾರಿ ಭಾಷೆ ಹಾಗೂ ಮಾಧ್ಯಮದ ವಿಷಯದಡಿಯಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿರುವ ಇವರು ‘ಮನಸ್ಸ್ ರೋ ಪಲಕ’ ಎಂಬ ಬ್ಯಾರಿ ಭಾಷೆಯಲ್ಲಿ ಬರೆದ ಚೊಚ್ಚಲ ಕವನ ಸಂಕಲನ ಬರೆದಿದ್ದಾರೆ. ಅಲ್ಲದೇ ‘ಬ್ಯಾರಿ ಕಾವ್ಯ ಸಂಪುಟ’, ‘ನೇತ್ರಾವತಿ’, ‘ವನಸುಮಗಳು’, ‘ಆಕಾಶ-ತಾಯಿ’ ಹಾಗೂ ‘ಮುಗಿಲಮಾಲೆ’ ಸಂಗ್ರಹಿತ ಕವನ ಸಂಕಲನದಲ್ಲಿ ಇವರ ಕವನಗಳು ಪ್ರಕಟಗೊಂಡಿವೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬುಡೋಳಿ ನಿವಾಸಿ ಇಬ್ರಾಹಿಂ ಫಾಝಿಲ್ ಹನೀಫಿ ಹಾಗೂ ಖೈರುನ್ನೀಸಾ ದಂಪತಿಯ ಪುತ್ರರಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: