ಉಡುಪಿ ನಾಲ್ವರ ಹತ್ಯೆ ಪ್ರಕರಣ: ಪ್ರವೀಣ್ ಚೌಗಲೆ ಮೇಲೆ ಅನುಮಾನ ಬರಲು ಕಾರಣ ಏನು? - Mahanayaka

ಉಡುಪಿ ನಾಲ್ವರ ಹತ್ಯೆ ಪ್ರಕರಣ: ಪ್ರವೀಣ್ ಚೌಗಲೆ ಮೇಲೆ ಅನುಮಾನ ಬರಲು ಕಾರಣ ಏನು?

nejaru case
15/11/2023

ಉಡುಪಿ: ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದ ಶಂಕಿತ ಆರೋಪಿ ಪ್ರವೀಣ್ ಅರುಣ್ ಚೌಗಲೆ(39)ಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು ಕೊಲೆಗೆ ಕಾರಣ ವಿಚಾರಣೆ ಯಿಂದ ತಿಳಿದು ಬರಬೇಕಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ವಿಚಾರಣೆಯಲ್ಲಿ ಈ ಕೊಲೆ ಪ್ರಕರಣದಲ್ಲಿ ಆತನ ಪಾತ್ರ ಕಂಡು ಬಂದಲ್ಲಿ ಆತನನ್ನು ಬಂಧಿಸಿ ಕಾನೂನು ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು

ಆರೋಪಿಯನ್ನು ಕುಡುಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಉಡುಪಿಗೆ ಕರೆದುಕೊಂಡು ಬರಲಾಗಿದೆ. ಇದೀಗ ಆತನನ್ನು ವಿಚಾರಣೆಗೊಳಪಡಿಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಕೆಲವೊಂದು ತಾಂತ್ರಿಕ ಹಾಗೂ ಗುಪ್ತಚಾರ ಮಾಹಿತಿಯಂತೆ ಈ ವ್ಯಕ್ತಿ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದುಕೊಳ್ಳಲಾಗಿದೆ ಆತನ ವಿಚಾರಣೆಯಿಂದ ಕೊಲೆಗೆ ಕಾರಣ ಸೇರಿದಂತೆ ಹಲವು ಮಾಹಿತಿಗಳು ದೊರೆಯಲಿದೆ ಎಂದು ಅವರು ತಿಳಿಸಿದರು

ನಮ್ಮ ಮಾಹಿತಿ ಪ್ರಕಾರ ಆತ ಸಿಐಎಸ್ ಎಫ್ ಹಾಗೂ ಸಿಆರ್ ಪಿಎಫ್ ನಲ್ಲಿ ಇರಲಿಲ್ಲ ಎಂಬುದು ತಿಳಿದು ಬಂದಿದೆ. ಆತ ಸಿವಿಲ್ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸಿರಬಹುದು ಎಂಬ ಮಾಹಿತಿ ದೊರೆತಿದೆ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದವರು ಹೇಳಿದರು

ಈ ಪ್ರಕರಣದಲ್ಲಿ ನಾವು 15–20 ಮಂದಿ ಶಂಕಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದೆವು. ಅದೇ ರೀತಿ ಪ್ರವೀಣನನ್ನು ಕೂಡ ವಶಕ್ಕೆ ಪಡೆದುಕೊಂಡು ವಿಚಾರ ನಡೆಸುತ್ತಿದ್ದೇವೆ ಎಂದು ಎಸ್ ಪಿ ತಿಳಿಸಿದರು.

ಇತ್ತೀಚಿನ ಸುದ್ದಿ