ಅಪ್ರಾಪ್ತೆ ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ ಯುವಕ: ಫೋಕ್ಸೊಗೆ ಹೆದರಿ ಆತ್ಮಹತ್ಯೆಯ ಸಂದೇಶ ಕಳಿಸಿ ನಾಪತ್ತೆ!
ಚಾಮರಾಜನಗರ: ಅಪ್ರಾಪ್ತೆ ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ ಯುವಕನೋರ್ವ ಫೋಕ್ಸೊಗೆ ಹೆದರಿ ಆತ್ಮಹತ್ಯೆಗೆ ಮುಂದಾದ ಘಟನೆ ಚಾಮರಾಜನಗರ ತಾಲ್ಲೂಕು ಬಿಸಲವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಾರ್ತಿಕ್ (28) ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವಿಡಿಯೋ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾನೆ. ಈತ ಚಾಮರಾಜನಗರ ತಾಲ್ಲೂಕು ಬಿಸಲವಾಡಿ ಗ್ರಾಮದ ಅಪ್ರಾಪ್ತೆಯನ್ನು ಮದುವೆಯಾಗಿದ್ದು ಆಕೆ ಈಗ ಗರ್ಭಿಣಿಯಾಗಿದ್ದಾಳೆ. ಹೀಗಾಗಿ ಪ್ರಕರಣ ದಾಖಲಾಗುವ ಭೀತಿ ಎದುರಿಸುತ್ತಿದ್ದ ಎನ್ನಲಾಗಿದೆ.
ತನಗೆ ಜೈಲು ಶಿಕ್ಷೆ ಆಗುತ್ತೆ ಎಂದು ಹೆದರಿ ಯುವಕ ಆತ್ಮಹತ್ಯೆಯ ಸಂದೇಶ ಕಳಿಸಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನನ್ನ ಸಾವಿಗೆ ನಾನೇ ಕಾರಣ ಎಂದು ವಿಡಿಯೋ ಮಾಡಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ವಿಡಿಯೋದ ಆಧಾರದಲ್ಲಿ ಚಾಮರಾಜನಗರ ತಾಲ್ಲೂಕಿನ ಜಲಾಶಯ ವ್ಯಾಪ್ತಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡ್ಯಾಂ ಬಳಿಯಲ್ಲಿ ಯುವಕನ ಬೈಕ್ ಪತ್ತೆಯಾಗಿದೆ. ಸದ್ಯ ಯುವಕ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.