10:55 AM Wednesday 12 - March 2025

ಬಿರುಕು? ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ!?

09/01/2025

ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ದೆಹಲಿ ಚುನಾವಣೆಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ನಡುವಿನ ವಾಕ್ಸಮರ ಮೈತ್ರಿಕೂಟದ ಬಿರುಕಿಗೆ ಕನ್ನಡಿ ಹಿಡಿದಿದೆ. ಈ ಕುರಿತು ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಕೇವಲ ಲೋಕಸಭೆ ಚುನಾವಣೆಗೆ ಮಾತ್ರ ಇಂಡಿಯಾ ಮೈತ್ರಿಕೂಟ ರಚನೆ ಮಾಡಿದ್ದರೆ ಕೂಡಲೇ ಮೈತ್ರಿಕೂಟವನ್ನು ವಿಸರ್ಜಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಮ್ಮುವಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಒಮರ್‌ ಅಬ್ದುಲ್ಲಾ, ಇಂಡಿಯಾ ಮೈತ್ರಿಕೂಟದ ಬಳಿ ನಾಯಕತ್ವ ಅಥವಾ ಕಾರ್ಯಸೂಚಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, “ಸ್ಪಷ್ಟತೆ ಇಲ್ಲದೇ ನಾವು ಮೈತ್ರಿಕೂಟದಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಮೈತ್ರಿಕೂಟ ತಾತ್ಕಾಲಿಕವಾದುದು ಎಂದಾದರೆ ಅದನ್ನು ರದ್ದು ಮಾಡುವುದೇ ಒಳಿತು..” ಎಂದು ಒಮರ್‌ ಅಬ್ದುಲ್ಲಾ ಅಭಿಪ್ರಾಯಪಟ್ಟರು.

“ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ನಡುವೆ ನಡೆಯುತ್ತಿರುವ ತೀವ್ರ ರಾಜಕೀಯ ಜಿದ್ದಾಜಿದ್ದಿ, ಇಂಡಿಯಾ ಮೈತ್ರಿಕೂಟದ ಅಸ್ಪಷ್ಟತೆಗೆ ಸಾಕ್ಷಿಯಾಗಿದೆ. ದೆಹಲಿಯನ್ನು ಯಾರು ಆಳಬೇಕು ಎಂಬುದನ್ನು ಅಲ್ಲಿನ ಜನತೆ ನಿರ್ಧರಿಸುತ್ತಾರೆ. ಆದರೆ ಆಪ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂಧ ಹೇಗೆ ದೂರ ಇಡಬೇಕು ಎಂಬುದರ ಕುರಿತು ಚಿಂತಿಸಬೇಕು..” ಎಂದು ಒಮರ್‌ ಅಬ್ದುಲ್ಲಾ ಒತ್ತಾಯಿಸಿದರು.

“ಈ ಬಗ್ಗೆ ನಾನು ಏನನ್ನೂ ಹೇಳಲಾರೆ ಏಕೆಂದರೆ ನಮಗೂ ಮತ್ತು ದೆಹಲಿ ವಿಧಾನಸಭೆ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಆದರೆ ಇಂಡಿಯಾ ಮೈತ್ರಿಕೂಟದ ನಾಯಕತ್ವ ಮತ್ತು ಅಜೆಂಡಾ ಹಾಗೂ ಒಟ್ಟಾರೆ ಮೈತ್ರಿಕೂಟದ ಅಸ್ತಿತ್ವದ ಬಗ್ಗೆ ನಮಗೆ ಸ್ಪಷ್ಟತೆ ಬೇಕಿದೆ. ಮೈತ್ರಿಕೂಟ ಲೋಕಸಭೆ ಚುನಾವಣೆಗೆ ಮಾತ್ರ ಸಿಮೀತವಾಗಿದ್ದರೆ, ಕೂಡಲೇ ಅದನ್ನು ವಿಸರ್ಜಿಸಬೇಕು’ ಎಂದು ಒಮರ್‌ ಅಬ್ದುಲ್ಲಾ ಒತ್ತಾಯಿಸಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version