ಕಾವೇರಿ ಹೋರಾಟದ ಜಾಗೃತಿ ಸಭೆ: ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಕರೆ ನೀಡಿದ ಸರ್ವ ಸಂಘಟನೆ - Mahanayaka
9:41 PM Thursday 19 - September 2024

ಕಾವೇರಿ ಹೋರಾಟದ ಜಾಗೃತಿ ಸಭೆ: ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಕರೆ ನೀಡಿದ ಸರ್ವ ಸಂಘಟನೆ

sangattane
23/09/2023

ಬೆಂಗಳೂರು: ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಸರ್ವ ಸಂಘಟನೆಗಳು ನಡೆಸಿದ ಕಾವೇರಿ ಹೋರಾಟದ ಜಾಗೃತಿ ಸಭೆಯಲ್ಲಿ ಸೆಪ್ಟೆಂಬರ್ 26ಕ್ಕೆ ಬೆಂಗಳೂರು ಬಂದ್‌ ಘೋಷಿಸಲಾಗಿದೆ. ಕಾವೇರಿ ನದಿ ಭಾಗದ ಎಲ್ಲ ಜಿಲ್ಲೆಯ ಜನರು ಬೆಂಗಳೂರು ಬಂದ್‌ಗೆ ಬೆಂಬಲಿಸುವಂತೆ ಕರೆ ನೀಡಲಾಗಿದೆ.

ಕುಡಿಯುವ ನೀರಿನ ಅಗತ್ಯತೆ ಅರಿಯದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಅವೈಜ್ಞಾನಿಕ ಆದೇಶ ಖಂಡಿಸಲು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ರೈತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ, ಮತ್ತಿತರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಒಟ್ಟಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಕಾವೇರಿ ಹೋರಾಟದ ಜಾಗೃತಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಆಮ್‌ ಆದ್ಮಿ ಪಕ್ಷದ ರಾಜ್ಯಾಧಕ್ಷ ಮುಖ್ಯಮಂತ್ರಿ ಚಂದ್ರು, ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೀರಲ್ಲಾ ಏನು ಕಡಿದು ಕಟ್ಟೆ ಹಾಕಿದ್ದೀರಾ, ಮೇಕೆದಾಟು ಯೋಜನೆ ಯಾಕೆ ಪ್ರಾರಂಭಿಸಿಲ್ಲ, ಇದರ ಬದಲಾಗಿ ನೀವು ಎಲ್ಲಿದ್ದೀರಿ ಎಂದು ನಮಗೆ ಪ್ರಶ್ನೆ ಮಾಡ್ತೀರಾ? ಅಧಿವೇಶನ ಕರೆದು ನೀರು ಬಿಡಲ್ಲ ಎಂದು ನಿರ್ಣಯ ಮಾಡಿ, ಸುಪ್ರೀಂಕೋರ್ಟ್‌ಗೂ ವಿಚಾರ ತಿಳಿಸಿ, ಕೋರ್ಟ್ ಛೀಮಾರಿ ಹಾಕಬಹುದು, ಜೈಲಿಗೆ ಹಾಕಬಹುದು, ಏನೇನಕ್ಕೋ ಜೈಲಿಗೆ ಹೋಗ್ತಿರಾ ರಾಜ್ಯದ ಹಿತಕ್ಕಾಗಿ ಜೈಲಿಗೆ ಹೋಗಲು ಆಗಲ್ಲವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.


Provided by

ನಾಡು, ನುಡಿ, ಜನ ರಕ್ಷಣೆ ಬಂದಾಗ ಆಮ್ ಆದ್ಮಿ ಪಕ್ಷ ಬೇಧಬಾವ ಇಲ್ಲದೆ ಹೋರಾಟ ಮಾಡುತ್ತದೆ. ಒಂದು ಕೋಟಿಗೂ ಹೆಚ್ಚು ಜನ ಬೆಂಗಳೂರಿನಲ್ಲಿದ್ದು, ಬೆಂಗಳೂರಿಗೆ 1450 ಎಂಎಲ್‌ಡಿ ನೀರು ಬೇಕು. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 150 ಲೀಟರ್ ನೀರು ಬೇಕು. ಆದರೆ, ಈಗ 108 ಲೀಟರ್ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ತಮಿಳುನಾಡಿಗೆ ನೀರು ಬಿಟ್ಟರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆಯಾಗಲಿದೆ. ಇಷ್ಟು ವರ್ಷ ಅಧಿಕಾರ ನಡೆಸಿದ ಮೂರು ಪಕ್ಷಗಳು, ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿವೆ. ನಿಮಗೆ ನಾಡಿನ ಹಿತ ಕಾಪಾಡುವ ಬದ್ಧತೆ ಇಲ್ಲವಾ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಜನ ಹೋರಾಟ ಮಾಡಲಿ

ಬೆಂಗಳೂರಿನಲ್ಲಿ 1.30 ಲಕ್ಷ ಜನ ಇದ್ದು, ಇದರಲ್ಲಿ 65 ಲಕ್ಷ ಜನ ಬೇರೆ ಭಾಷಿಕರು ಇದ್ದಾರೆ. ಅವರಿಗೂ ಕುಡಿಯುವ ನೀರಿನ ಅವಶ್ಯಕತೆ ಇದೆ. 45 ದಿನಗಳಿಂದ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದ್ದರೂ ಬೆಂಗಳೂರಿನ ಜನ ಮಲಗಿದ್ದಾರೆ. ಇದು ಸರಿಯಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಯಾವುದೇ ಭಾಷಿಕರು ಆದರೂ ಕುಡಿಯಲು, ಬಳಸಲು ನೀರು ಮುಖ್ಯ ಆದ್ದರಿಂದ ಎಲ್ಲರೂ ಈ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಜನರ ಬದುಕು ಮುಖ್ಯ, ಯಾವುದೇ ಆದೇಶ ಏನೂ ಮಾಡಲು ಆಗಲ್ಲ. ಕುಡಿಯುವ ನೀರಿಗೆ ಆದ್ಯತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದರು.

ಸಹಿ ಸಂಗ್ರಹ ಚಳುವಳಿ

ಎಎಪಿ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಬೆಂಗಳೂರಿನ ಜನ ಬೀದಿಗಿಳಿಯುವುದು ಕಷ್ಟ ಎನ್ನಲಾಗುತ್ತದೆ. ಆದರೆ ಸ್ಟೀಲ್ ಫ್ಲೈ ಓವರ್ ವಿಚಾರದಲ್ಲಿ ಬೆಂಗಳೂರಿಗರು ಫ್ರೀಡಂಪಾರ್ಕ್‌ನಲ್ಲಿ ಹೋರಾಟ ಮಾಡಿದ್ದರು, ಅಂತಹ ಕೆಲಸ ಮತ್ತೆ ಆಗಬೇಕು. ಮಾತ್ರವಲ್ಲದೆ ನಾವೇ ಜನರ ಬಳಿ ಹೋಗಿ ಸಹಿ ಸಂಗ್ರಹಣೆ ಮಾಡಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಎಎಪಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷ, ರೈತ ಸಂಘಟನೆಗಳ ಒಕ್ಕೂಟ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟ ಮತ್ತಿತರ ಸಂಘ ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ