ಪೆಟ್ರೋಲ್, ಡಿಸೇಲ್, ಗ್ಯಾಸ್‌ ಬೆಲೆ ಏರಿಕೆ ವಿರುದ್ಧ ಅಂಬೇಡ್ಕರ್ ಸೇನೆ ವಿನೂತನ ಪ್ರತಿಭಟನೆ

16/02/2021

ರಾಯಚೂರು: ಪೆಟ್ರೋಲ್, ಡಿಸೇಲ್, ಗ್ಯಾಸ್‌ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ‌ ರಸ್ತೆಗಳಲ್ಲಿ ತಳ್ಳುಬಂಡಿಯಲ್ಲಿ ದ್ವಿಚಕ್ರವಾಹನ ಹಾಗೂ ಪೆಟ್ರೋಲ್ ಬಾಟಲಿ ಪ್ರದರ್ಶಿಸಿದ ಪ್ರತಿಭಟನಾಕಾರರು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್‌ನಿಂದಾಗಿ‌ ದೇಶದಲ್ಲಿ ನಾಗರಿಕರು ಆರ್ಥಿಕ ಸಂಕಷ್ಟಕ್ಕೆ ಗುರಿಯಾದ್ದಾರೆ. ಕೂಲಿ ಕಾರ್ಮಿಕರು ಕೆಲಸವಿಲ್ಲದ ಪರಿತಪಿಸುತ್ತಿರುವಾಗ ಕೇಂದ್ರ ಸರ್ಕಾರವು ಪ್ರತಿನಿತ್ಯ ಪೆಟ್ರೋಲ್, ಡಿಸೇಲ್ ಹಾಗೂ ದಿನಬಳಕೆಯ ವಸ್ತುಗಳ‌ ಬೆಲೆ ಏರಿಕೆ ಮಾಡಿ‌ ಬಡ, ಮಧ್ಯಮ ವರ್ಗ‌ ಹಾಗೂ‌ ಜನಸಾಮಾನ್ಯರನ್ನು ಸಮಸ್ಯೆಗೆ ದೂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ವಿರುದ್ಧ ರಾಷ್ಟ್ರಪತಿ ಮಧ್ಯಪ್ರವೇಶಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಂಡು ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ  ಜಿಲ್ಲಾಡಳಿತದ‌ ಮೂಲಕ ರಾಷ್ಟ್ರಪತಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಬಂದೆನವಾಜ್, ಕುಮಾರಸ್ವಾಮಿ, ಮಹೇಶ ಕುಮಾರ, ಅಮರಯ್ಯ ಸ್ವಾಮಿ, ಬಾಷಾ, ಶಬ್ಬೀರ್ ಅಲಿ, ಸಂತೋಷ, ಭೀಮೇಶ, ಶಿವರಾಜ, ವೆಂಕಟೇಶ ಇದ್ದರು.

ಇತ್ತೀಚಿನ ಸುದ್ದಿ

Exit mobile version